ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಆಸ್ಪತ್ರೆ ಮುಂಭಾಗ ಇರುವ ತರಕಾರಿ ಮಾರುಕಟ್ಟೆ ಹಳೆಕೋರ್ಟ್ ಸರ್ಕಲ್ನಲ್ಲಿರುವ ಹೀರೋ ಹೋಂಡ ಶೋರೂಂ ಪಕ್ಕಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ತಾಹಿರಾ ಬೇಗಂ ತಿಳಿಸಿದರು.ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಚಿಕ್ಕದಾಗಿದ್ದರೂ ಹಲವಾರು ಸಮಸ್ಯೆಗಳಿದ್ದು ಸದಸ್ಯರ ಸಹಯೋಗದೊಂದಿಗೆ ಇವುಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಹಲವು ವರ್ಷಗಳಿಂದ ಪರಿಹಾರ ಈಗ ದೊಡ್ಡ ಸಮಸ್ಯೆಗಳಾಗಿ ರೂಪುಗೊಂಡಿವೆ. ಮುಖ್ಯವಾಗಿ ಪಟ್ಟಣ ಪಂಚಾಯಿತಿಯವರಿಗೆ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದ್ದು, ವಾಹನಗಳ ಪಾರ್ಕಿಂಗ್ಗೆ ಜಾಗ ನಿಗದಿಯಾಗದ ಕಾರಣ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದರ ಪರಿಹಾರಕ್ಕೆ ಪೊಲೀಸ್ ಇಲಾಖೆಯವರ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದೆಂದರು.ಮಾರುಕಟ್ಟೆ ಸ್ಟಳಾಂತರಕ್ಕೆ ಸುದೀರ್ಘ ಚರ್ಚೆ ನಡೆಸಿದ ಅಧ್ಯಕ್ಷರು ಹಾಗೂ ಸದಸ್ಯರು ಈ ಬಾರಿಯಾದರೂ ಮಾರುಕಟ್ಟೆ ಸ್ಥಳಾಂತರ ಮಾಡಬೇಕೆಂದು ಪಟ್ಟು ಹಿಡಿದರು. ಅನೇಕ ಬಾರಿ ಚರ್ಚೆ ನಡೆಸಿ ಎಷ್ಟೇ ಪ್ರಯತ್ನಪಟ್ಟರು ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿರುವ ಹೀರೋ ಹೋಂಡಾ ಶೋ ರೂಂ ಹತ್ತಿರ ಖಾಲಿ ಜಾಗವಿದ್ದು ಮಾರುಕಟ್ಟೆಗೆ ಯೋಗ್ಯವಾದ ಸ್ಥಳವಾಗಿದೆ. ಹಾಗಾಗಿ ಅದನ್ನು ಸರ್ವೇ ಮಾಡಿಸಿ ಮಾರುಕಟ್ಟೆ ನಿರ್ಮಿಸುವಂತೆ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸದಸ್ಯರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ತಾಹಿರ ಬೇಗಂ ಶೀಘ್ರವೇ ಇದಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಪಟ್ಟಣದಲ್ಲಿ ಕೆಲ ಅಂಗಡಿ ಮಳಿಗೆಯವರು ಅತಿ ಕ್ರಮವಾಗಿ ಅನಧಿಕೃತ ಶೆಡ್ ಹಾಗೂ ಶೀಟುಗಳನ್ನು ನಿರ್ಮಿಸಿಕೊಂಡಿದ್ದು, ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಮತ್ತು ರಸ್ತೆಯಲ್ಲಿಯೇ ತಮ್ಮ ವ್ಯಾಪಾರದ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ವಾಹನ ಸಾವರರಿಗೂ ಕಿರಿಕಿರಿ ಉಂಟಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ನಾವು ಅನೇಕ ಬಾರಿ ವ್ಯಾಪಾರಸ್ಥರಿಗೆ ಬುದ್ಧಿವಾದ ಹೇಳಿ ನೋಟಿಸ್ ನೀಡಿದರು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ಪೊಲೀಸರ ನೆರವಿನಿಂದ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳನ್ನು ಜೆಸಿಬಿ ತಂದು ಒಡೆದು ಹಾಕಿ ಜನಸಾಮಾನ್ಯರಿಗೆ ಅನುಕೂಲ ಮಾಡುವುದಾಗಿ ತಿಳಿಸಿದರು.ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಫುಡ್ ಕೋರ್ಟ್ ನಿರ್ಮಾಣ ಮಾಡಲು ತೀರ್ಮಾನಿಸಿದ್ದು ಮುಂದಿನ ದಿನಗಳಲ್ಲಿ ಶೀಘ್ರದಲ್ಲಿ ಫುಡ್ ಕೋರ್ಟ್ ಮಾಡಿಕೊಡುವುದಾಗಿ ಭರವಸೆ ನೀಡಿದರು.ಬಾರ್ಗಳಲ್ಲಿ ಸ್ವಚ್ಛತೆ ಕಾಪಾಡಿ: ಪಟ್ಟಣದಲ್ಲಿ ಬಾರ್ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ಪ್ಲಾಸ್ಟಿಕ್ ಹಾಗೂ ಬಾಟಲ್ಗಳು ಎಲ್ಲೆಂದರಲ್ಲಿಬಿದ್ದು ದುರ್ನಾತ ಬೀರುತ್ತಿದ್ದು, ಮಹಿಳೆಯರು ಪಟ್ಟಣದಲ್ಲಿ ಓಡಾಡುವುದಕ್ಕೆ ಮುಜುಗರ ವ್ಯಕ್ತಪಡಿಸುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕೊಡಲೇ ಬಾರ್ ಮಾಲೀಕರನ್ನು ಕರೆಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭರವಸೆ ನೀಡಿದರು.
ರಸ್ತೆಯಲ್ಲಿ ಮತ್ತೆ ಹಂಪ್ಸ್ ನಿರ್ಮಿಸಿ:ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ರಸ್ತೆಗೆ ಹಾಕಿದ ಡಾಂಬರೀಕರಣದಿಂದ ಹಂಪ್ಸ್ಗಳು ಸಂಪೂರ್ಣ ಮುಚ್ಚಿಹೋಗಿವೆ. ಇದರಿಂದ ರಸ್ತೆಯಲ್ಲಿ ವಾಹನಗಳು ಅತಿ ವೇಗದಲ್ಲಿ ಚಲಿಸಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ಶಾಲಾ ಮಕ್ಕಳ ವಾಹನಗಳು ಸಂಚರಿಸುತ್ತವೆ. ಹಾಗಾಗಿ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಮುಚ್ಚಿಹೋದ ಹಂಪ್ಸ್ಗಳನ್ನು ಮತ್ತೆ ಪುನರ್ ನಿರ್ಮಿಸಲು ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯ ಮಾಡಿದರು.
ಈ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳಿದ್ದರು.