ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ ಅಧಿಕಾರಿಗಳು ಅಮಾನತು: ಮಾಜಿ ಡಿಸಿಎಂ ಅಶ್ವತ್ಥನಾರಾಯಣ

| Published : Jun 07 2025, 02:00 AM IST

ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ ಅಧಿಕಾರಿಗಳು ಅಮಾನತು: ಮಾಜಿ ಡಿಸಿಎಂ ಅಶ್ವತ್ಥನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಡೀ ಕ್ರಿಕೆಟ್ ತಂಡವನ್ನು ಕರೆದೊಯ್ಯಲು ಸಮರ್ಪಕವಾದ ಭದ್ರತಾ ವ್ಯವಸ್ಥೆ ಇಲ್ಲ ಎಂಬ ಕುಂಟು ನೆಪವೊಡ್ಡಿ ಅವರನ್ನು ಕರೆದೊಯ್ಯಬೇಕಾಯಿತಾ. ಇವರೇನು ದೊಡ್ಡ ಬುಲ್ಡೋಜರಾ, ಇವರು ಹೋಗಿದ ತಕ್ಷಣ ಜನ ಬಿಟ್ಟು ಬಿಡುತ್ತಾರಾ, ಪುಕ್ಕಟ್ಟೆ ಪ್ರಚಾರ ಗಿಟ್ಟಿಸಲು ಇಂತಹ ನಾಟಕ ಆಡುವುದನ್ನು ಇನ್ನಾದರೂ ಬಿಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಪ್ರಕರಣದಲ್ಲಿ ಅಮಾಯಕ ಅಧಿಕಾರಿಗಳು ಅಮಾನತು ಮಾಡಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ಸರ್ಕಾರದ ಮುನ್ನೆಚ್ಚರಿಕೆ ಇಲ್ಲದೆ ಅಮಾಯಕ ಹಲವು ಜೀವಗಳು ಹೋಗಿವೆ. ಇದಕ್ಕೆ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರೇ ಕಾರಣಕರ್ತರು ಎಂದು ದೂರಿದರು.

ಆರ್‌ಸಿಬಿ ತಂಡಕ್ಕೆ ವಿಧಾನಸೌಧದ ಬಳಿಯೇ ಅಭಿನಂದಿಸುವುದಾಗಿ ಜನರನ್ನು ಬರಲು ಹೇಳಿದ್ದವರು ಯಾರು. ಅಲ್ಲಿ ಮುಖ್ಯಮಂತ್ರಿಗಳ ಕುಟುಂಬದವರು, ಮಕ್ಕಳು, ಮೊಮ್ಮಕ್ಕಳು, ಮಂತ್ರಿಗಳ ಕುಟುಂಬದವರಿಗೆ ಮಾತ್ರ ಅವಕಾಶ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಡೀ ಕ್ರಿಕೆಟ್ ತಂಡವನ್ನು ಕರೆದೊಯ್ಯಲು ಸಮರ್ಪಕವಾದ ಭದ್ರತಾ ವ್ಯವಸ್ಥೆ ಇಲ್ಲ ಎಂಬ ಕುಂಟು ನೆಪವೊಡ್ಡಿ ಅವರನ್ನು ಕರೆದೊಯ್ಯಬೇಕಾಯಿತಾ. ಇವರೇನು ದೊಡ್ಡ ಬುಲ್ಡೋಜರಾ, ಇವರು ಹೋಗಿದ ತಕ್ಷಣ ಜನ ಬಿಟ್ಟು ಬಿಡುತ್ತಾರಾ, ಪುಕ್ಕಟ್ಟೆ ಪ್ರಚಾರ ಗಿಟ್ಟಿಸಲು ಇಂತಹ ನಾಟಕ ಆಡುವುದನ್ನು ಇನ್ನಾದರೂ ಬಿಡಬೇಕು. ಇಲ್ಲದಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.ಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ಕೊಟ್ಟಿಲ್ಲ ಎಂದರೆ ಪ್ರವೇಶಕ್ಕೆ ಅವಕಾಶ ಕೊಟ್ಟವರು ಯಾರು. 50 ವರ್ಷಕ್ಕಿಂತಲೂ ಹೆಚ್ಚಿನ ರಾಜಕೀಯ ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹ ಸುಳ್ಳು ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ. ಈ ಸರ್ಕಾರದ ನಡೆ ಅಸಹ್ಯ ಹುಟ್ಟಿಸುತ್ತಿದೆ. ಆತ್ಮಸಾಕ್ಷಿ ಇದ್ದರೆ ಕುರ್ಚಿ ತ್ಯಜಿಸಿ. ಅದು ಬಿಟ್ಟು ಕಣ್ಣೀರು ಹಾಕುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಛೇಡಿಸಿದರು.

ವಿಜಯೋತ್ಸವಕ್ಕೆ ಎಷ್ಟು ಜನ ಬರುತ್ತಾರೆಂಬ ಮಾಹಿತಿ ಇಲ್ಲ ಎಂದರೆ ದುಷ್ಟ ಸರ್ಕಾರವಲ್ಲವೇ. ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಬಿಟ್ಟಿ ಪ್ರಚಾರ ಮಾಡಬೇಕಿತ್ತಾ, ಮೋದಿಯವರು ಹೇಗೆ ರ್‍ಯಾಲಿ ಮಾಡುತ್ತಾರೆ ಎಂಬುದು ತಿಳಿದಿಲ್ಲವೇ. ಯಾವಾಗಲಾದರೂ ಇಷ್ಟು ಗಲೀಜಾಗಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಟೀಂ ಕ್ಯಾಪ್ಟರ್ ಯಾರು ಎಂದೇ ಗೊತ್ತಿಲ್ಲ. ಇನ್ನು ಕ್ರಿಕೆಟ್ ಬಗ್ಗೆ ಇವರಿಗೆ ಏನು ಗೊತ್ತು. ನಮಗೆ ಸಾವಿನ ಮೇಲೆ ರಾಜಕೀಯ ಮಾಡಬೇಡಿ ಎಂದು ಹೇಳುತ್ತಾರೆ. ಗ್ಯಾರಂಟಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಗಿರಾಕಿಗಳಿಗೆ ಜನರ ಭಾವನೆಗಳು ಹೇಗೆ ತಾನೆ ತಿಳಿಯುತ್ತವೆ ಎಂದು ಪ್ರಹಾರ ನಡೆಸಿದರು.

ಪೆಹಲ್ಗಾಂನಲ್ಲಿ ನಡೆದ ಘಟನೆ ಭಯೋತ್ಪಾದರು ನಡೆಸಿದ್ದು, ಇನ್ನು ಕುಂಭ ಮೇಳದಲ್ಲಿ ಕೋಟ್ಯಂತರ ಜನರು ಬಂದಿದ್ದರು. ಪೆಹಲ್ಗಾಂನಲ್ಲಿ ಭಯೋತ್ಪಾದಕರು ಮಾಡಿರುವುದಕ್ಕೂ ಇದಕ್ಕೂ ತಾಳೆ ಮಾಡುವುದು ಸರಿಯಲ್ಲ. ಗಂಗಾ ನದಿಯಲ್ಲಿ ಮುಳುಗಿದರೆ ಒಳ್ಳೆಯದಾಗುತ್ತಾ ಎಂದು ಪ್ರಿಯಾಂಕ ಗಾಂಧಿ ಕೇಳುತ್ತಿದ್ದರು. ಇಂತಹವರಿಗೆ ನಮ್ಮ ಭಾವನೆಗಳು ಹೇಗೆ ಅರ್ಥವಾಗುತ್ತದೆ. ಇವರು ಮನಷ್ಯರೇ ಅಲ್ಲ ಎಂದು ಕಿಡಿಕಾರಿದರು.