ಕನ್ನಡಪ್ರಭವಾರ್ತೆ ಚಿಕ್ಕನಾಯಕನಹಳ್ಳಿ

ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಚಿಕ್ಕಪುಟ್ಟ ಚಿಕಿತ್ಸೆಗಳಿಗಾಗಿ ಜನರು ಅಲೆದಾಡಬಾರದು ಎಂದು ಸಾಸಲು ಗ್ರಾಮದ ಹಾಗೂ ಸುತ್ತಮುತ್ತಲ ಜನರಿಗೆ ಅನುಕೂಲವಾಗಲೆಂದು ಈ ಉಪ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಾಲೂಕಿನ ಸಾಸಲು ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ಕಟ್ಟಡದ ಶಂಕುಸ್ಥಾಪನೆ ನೆರೆವೆರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಅದರಂತೆ ಶೆಟ್ಟಿಕೆರೆ ಹೋಬಳಿಯ ಈ ಸಾಸಲು ಗ್ರಾಮ ಈ ಸುತ್ತ ಮುತ್ತಲ ಗ್ರಾಮಗಳಾದ ಗೊಲ್ಲರಹಟ್ಟಿ, ಬನಶಂಕರಿ, ಗೋಪಾಲನಹಳ್ಳಿ, ಮಾಸ್ತಯ್ಯನ ಪಾಳ್ಯ ಸೇರಿದಂತೆ ಇನ್ನು ಸಣ್ಣಪುಟ್ಟ ಗ್ರಾಮಗಳ ಜನರಿಗೆ ತುರ್ತು ಚಿಕಿತ್ಸೆ ಹಾಗೂ ಪ್ರಾಥಮಿಕ ಹಂತದಲ್ಲಿ ನೀಡಬಹುದಾದಂತಹ ಚಿಕಿತ್ಸೆಗೆ ಅನುಕೂಲವಾಗಲೆಂದು ಇಲ್ಲಿ ಒಂದು ಆರೋಗ್ಯ ಉಪಕೇಂದ್ರ ಕಟ್ಟಡವನ್ನು ೬೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ವೈದ್ಯರಾದ ಡಾ.ಶಂಕರ್ ಮಾತನಾಡಿ, ಜನರಿಗಾಗಿ ಸಮುದಾಯ ಆರೋಗ್ಯ ಉಪಕೇಂದ್ರವನ್ನು ಇಲ್ಲಿ ಪ್ರಾರಂಭಿಸಲಾಗುವುದು. ಇದರಲ್ಲಿ ರೋಗಿಗಳನ್ನು ಸುಧಾರಿಸಲು ಕೇಲವು ಔಷಧಿಗಳನ್ನು ವಿತರಿಸಲು ಅನುಕೂಲವಾಗಲಿದ್ದು, ಈ ಉಪಕೇಂದ್ರದಲ್ಲಿ ಸಾಧ್ಯವಾದಷ್ಟು ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಒಬ್ಬರು ಸಮುದಾಯ ಆರೋಗ್ಯಾಧಿಕಾರಿ, ಶುಶ್ರೂಷಕಿಯರು, ಹಾಗೂ ಆಶಾಕಾರ್ಯಕರ್ತೆಯರು ಇರುತ್ತಾರೆ. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಸದಸ್ಯ ಎಸ್.ಜಿ.ರವಿಕುಮಾರ್, ನಿವೃತ್ತ ಪಿಡಿಒ ವಾಗೀಶ್‌ಕುಮಾರ್, ಸೇರಿದಂತೆ ಮುಖಂಡರಾದ ಎಸ್.ಎಂ.ಉಮೇಶ್, ಶಿವಣ್ಣ, ಪೂಜಾರ್ ಚಂದ್ರಣ್ಣ, ಗೊಲ್ಲರಹಟ್ಟಿಯ ಸುಧಾಕರ್ ಇದ್ದರು.