ಸ್ಪರ್ಷ ಕುಷ್ಠರೋಗದ ಜಾಗೃತಿ ಅಭಿಯಾನ ಕಾರ್ಯಕ್ರಮ

| Published : Feb 12 2024, 01:31 AM IST

ಸಾರಾಂಶ

ಗುರುಮಠಕಲ್ ಸಮೀಪದ ಸೈದಾಪುರ ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಪರ್ಶ ಕುಷ್ಠರೋಗ ಮುಕ್ತ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕುಷ್ಠರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ, ಸಂಪೂರ್ಣ ಚಿಕಿತ್ಸೆ ನೀಡಿದಲ್ಲಿ ಇದನ್ನು ಗುಣಪಡಿಸಬಹುದು. ರೋಗದ ಬಗ್ಗೆ ಇರುವ ಹೆದರಿಕೆಯನ್ನು ದೂರಮಾಡಲು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಯೋಗ ಶಾಲಾ ಹಿರಿಯ ತಂತ್ರಜ್ಞನ ಭಾಗಪ್ಪ ಕೋರೆ ಹೇಳಿದರು.

ಸಮೀಪದ ಬಾಲಛೇಡ ಗ್ರಾಮದ ಹೊರ ವಲಯದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ನವೋದಯ ಮಾದರಿ ವಸತಿ ಶಾಲೆ ಮತ್ತು ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಸ್ಪರ್ಷ ಕುಷ್ಠರೋಗ ಜಾಗೃತಿ ಅಭಿಯಾನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಬೇರೂರಿರುವ ತಪ್ಪು ತಿಳುವಳಿಕೆ ಮತ್ತು ಅರಿವಿನ ಕೊರತೆ, ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ವನ್ನು ಹೋಗಲಾಡಿಸಿ, ಕುಷ್ಠರೋಗಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು ಹಾಗೂ ಭಾರತವನ್ನು ಕುಷ್ಠರೋಗ ಮುಕ್ತವಾಗಿಸುವುದು ಗಾಂಧೀಜಿ ಕನಸಾಗಿದ್ದು, ಆದ್ದರಿಂದ,2017ರಿಂದ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನವನ್ನು ಕುಷ್ಠರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಕುಷ್ಠ ರೋಗದ ವಿರುದ್ಧ ಅಂತಿಮ ಸಮರ ಸಾರುವ ಧ್ಯೇಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಜ.30ರಿಂದ ಫೆ.13ರವರೆಗೆ ಸ್ಪರ್ಶ ಕುಷ್ಠ ರೋಗ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಂತರ ಆರೋಗ್ಯ ನೀರಿಕ್ಷಣಾಧಿಕಾರಿ ಜಗದೀಶ ಕುರಕುಂದಿ ಮಕ್ಕಳಿಗೆ ಪ್ರತಿಜ್ಞಾನ ವಿಧಿ ಬೋಧಿಸಿದರು. ವಸತಿ ಶಾಲೆಯ ಪ್ರಾಂಶುಪಾಲರು, ಆರೋಗ್ಯ ನೀರಿಕ್ಷಣಾಧಿಕಾರಿ ಜಗದೀಶ ಕುರಕುಂದಿ, ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.