ಚನ್ನಗಿರಿ ತಾಲೂಕಿನಾದ್ಯಂತ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆಯಿಂದಾಗಿ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಚನ್ನಗಿರಿ ಪಟ್ಟಣ ಮಾತ್ರವಲ್ಲ, ಕೆಲ ಗ್ರಾಮಾಂತರ ಪ್ರದೇಶಗಳಲ್ಲೂ ಅಡುಗೆ ಬೇಯಿಸಲು ಈಗ ಹಿಂದೆ ಬಳಕೆ ಮಾಡುತ್ತಿದ್ದ ಸೌದೆ ಒಲೆಗಳಿಗೆ ಮೊರೆಹೋಗುತ್ತಿದ್ದಾರೆ.
- ಚನ್ನಗಿರಿ ಗ್ಯಾಸ್ ಏಜೆನ್ಸಿ ಮುಂದೆ ಖಾಲಿ ಸಿಲಿಂಡರ್ ತಂದು ನಿಂತಿರುವ ಗ್ರಾಹಕರು
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಾದ್ಯಂತ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆಯಿಂದಾಗಿ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಚನ್ನಗಿರಿ ಪಟ್ಟಣ ಮಾತ್ರವಲ್ಲ, ಕೆಲ ಗ್ರಾಮಾಂತರ ಪ್ರದೇಶಗಳಲ್ಲೂ ಅಡುಗೆ ಬೇಯಿಸಲು ಈಗ ಹಿಂದೆ ಬಳಕೆ ಮಾಡುತ್ತಿದ್ದ ಸೌದೆ ಒಲೆಗಳಿಗೆ ಮೊರೆಹೋಗುತ್ತಿದ್ದಾರೆ.ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಪರಿಣಾಮವಾಗಿ ವಾಣಿಜ್ಯ ಅನಿಲ ಪೂರೈಕೆಗೆ ಭಾರಿ ಹಿನ್ನಡೆಯಾಗುತ್ತಿದೆ. ಅಲ್ಲದೇ, ಗೃಹ ಬಳಕೆ ಸಿಲಿಂಡರ್ ವ್ಯವಹಾರದಿಂದ ಹಿಡಿದು ವಾಣಿಜ್ಯ ಸಿಲಿಂಡರ್ ವ್ಯವಹಾರಗಳಿಗೂ ಮಂಕು ಕವಿದಿದೆ.
ಕಳೆದ ವಾರ ತಾಲೂಕು ದಂಡಾಧಿಕಾರಿ ಅಧ್ಯಕ್ಷತೆಯಲ್ಲಿ ಅಡುಗೆ ಅನಿಲ ವಿತರಕರ ಏಜೆನ್ಸಿಗಳ ಮಾಲೀಕರ ಸಭೆ ನಡೆಸಲಾಗಿದೆ. ಆನ್ ಲೈನ್ ಬುಕ್ ಮಾಡಿದ 25 ದಿನಗಳ ನಂತರ ಅಡುಗೆ ಅನಿಲ ದೊರೆಯಲಿದೆ. ಸಂಜೆ 7 ಗಂಟೆಯಿಂದ ಆನ್ ಲೈನ್ನಲ್ಲಿ ಬುಕ್ ಮಾಡಬೇಕು. ಆ ಸಂದರ್ಭ ಸರ್ವರ್ ಬ್ಯೂಸಿ ಸಮಸ್ಯೆ ಕೊಂಚ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ತಾಲೂಕಿನ ಜನತೆ ಆತಂಕ ಪಡಬೇಕಾಗಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದರು. ಅದರಂತೆ ಸಂಜೆ 7 ಗಂಟೆಯಿಂದ ಬೆಳಗಿನ ಜಾವದ ತನಕ ಆನ್ ಲೈನ್ ಬುಕಿಂಗ್ ಗೆ ಪ್ರಯತ್ನಿಸಿದರೂ ಸಹಾ ಬ್ಯುಸಿ ಎಂದು ಅಥವಾ ಲಿಂಕ್ ಸಿಗದಂತೆ ಆಗುತ್ತಿದೆ. ಇದು ಗ್ರಾಹಕರನ್ನು ಇನ್ನಿಲ್ಲದಂತೆ ಕಳವಳಕ್ಕೆ ಈಡುಮಾಡಿದೆ.ಈ ಮಧ್ಯೆ ಗ್ಯಾಸ್ ಏಜೆನ್ಸಿಯವರ ಮಾತಿಗೂ ಅಧಿಕಾರಿಗಳ ಹೇಳಿಕೆಗಳಿಗೂ ತಾಳೆಯಾಗದ ಕಾರಣ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬಗಳು ಹತ್ತಿರಕ್ಕೆ ಬರುತ್ತಿವೆ. ಹೀಗಿರುವಾಗ ಹಬ್ಬದ ಅಡುಗೆ ತಯಾರಿಸಲು ಅಡುಗೆ ಅನಿಲ ಸಿಲಿಂಡರ್ ಸಿಗುತ್ತದೋ, ಇಲ್ಲವೋ ಎಂಬ ಆತಂಕ ಜನರಲ್ಲಿ ಹೆಚ್ಚಾಗುತ್ತಿದೆ. ಪರಿಣಾಮ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತುಕೊಳ್ಳುತ್ತಿದ್ದಾರೆ.
- - -(ಬಾಕ್ಸ್) * ಆನ್ಲೈನ್ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಸಿಲಿಂಡರ್: ಸೌಭಾಗ್ಯ ಚನ್ನಗಿರಿಯಲ್ಲಿ ಅಡುಗೆ ಅನಿಲ ವಿತರಿಸುವ ಧೃವ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲೀಕರಾದ ಸೌಭಾಗ್ಯ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದು, ಒಂದು ಅಡುಗೆ ಅನಿಲ ಸಿಲಿಂಡರ್ ಪಡೆದ ಗ್ರಾಹಕರು 30 ದಿನ ಕಳೆದ ನಂತರವೇ ಆನ್ಲೈನ್ನಲ್ಲಿ ಬುಕ್ ಮಾಡಿದರೆ ಏಜೆನ್ಸಿಯವರೇ ಗ್ರಾಹಕರ ಮನೆಯ ಬಾಗಿಲಿಗೆ ಸಿಲಿಂಡರ್ ಕಳಿಸುತ್ತೇವೆ ಎಂದಿದ್ದಾರೆ.
2 ಸಿಲಿಂಡರ್ ಹೊಂದಿದ ಗ್ರಾಹಕರು ಅವರ ಮನೆಯಲ್ಲಿ ಒಂದು ತುಂಬಿದ ಸಿಲಿಂಡರ್ ಇರುತ್ತದೆ. ಇನ್ನೊಂದು ಸಿಲಿಂಡರ್ ಅನ್ನು ಉಪಯೋಗಿಸುತ್ತಿರುತ್ತಾರೆ. ಸಿಲಿಂಡರ್ ಖಾಲಿಯಾಗದೇ ಬುಕ್ ಮಾಡಿದ ಗ್ರಾಹಕರ ಮನೆಗೆ ಸಿಲಿಂಡರ್ ವಿತರಣೆ ಮಾಡಲು ಹೋದರೆ ಬೇರೆಯವರ ಮನೆಯ ಖಾಲಿ ಸಿಲಿಂಡರ್ಗಳನ್ನು ಹುಡುಕುತ್ತಾರೆ. ಹೀಗಾಗಬಾರದು. ಯುದ್ಧ ನಡೆಯುತ್ತಿರುವುದರ ಪರಿಣಾಮ ಅಡುಗೆ ಅನಿಲ ಪೂರೈಕೆಯಲ್ಲಿ ತಡವಾಗಬಹುದು. ಒಬ್ಬ ಗ್ರಾಹಕರಿಗೆ 30 ದಿನಕ್ಕೆ 1 ಸಿಲಿಂಡರ್ ಸಿಕ್ಕೇ ಸಿಗುತ್ತದೆ. ಆದರೆ, ಸಿಲಿಂಡರ್ ಖಾಲಿಯಾಗದೇ ಗ್ಯಾಸ್ ಕಚೇರಿ ಬಳಿ ಬಂದು ಸಾಲುಗಟ್ಟಿ ನಿಂತರೆ ಹೇಗೆ ಎಂದು ಹೇಳುತ್ತಾರೆ.- - -
-17ಕೆಸಿಎನ್ಜಿ3:ಚನ್ನಗಿರಿ ಪಟ್ಟಣದ ಗ್ಯಾಸ್ ಏಜೆನ್ಸಿ ಮುಂದೆ ಖಾಲಿ ಸಿಲಿಂಡರ್ಗಳನ್ನು ತಂದು ಸರತಿ ಸಾಲಿನಲ್ಲಿ ನಿಂತಿರುವ ಗ್ರಾಹಕರು.