ಡಂಬಳ: ಭೂಮಿಯ ಮೇಲಿನ ನೈಸರ್ಗಿಕ ಜೀವಸಂಕುಲವನ್ನು ರಕ್ಷಿಸುವುದು ಮತ್ತು ಪರಿಸರದ ಸಮತೋಲವನ್ನು ಕಾಪಾಡುವುದು, ಜೀವವೈವಿಧ್ಯದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ ತಿಳಿಸಿದರು.

ಡಂಬಳ ಗ್ರಾಮದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಪ್ರಯುಕ್ತ ಗ್ರಾಮ ಪಂಚಾಯಿತಿ ಹಾಗೂ ಅಹಿಂದ ಜನಸಂಘದ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಾಣಿ ಹಾಗೂ ಸಸ್ಯ ಸಂಕುಲಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಎಲ್ಲ ಜೀವವೈವಿಧ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಲಕ್ಷಾಂತರ ಜೀವ ಪ್ರಭೇದಗಳು ಅಳಿವಿನ ಭೀತಿಯಲ್ಲಿವೆ. ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮದಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದರು.

ತಾಲೂಕು ಯೋಜನಾಧಿಕಾರಿ ವಿಜಯಕುಮಾರ ಬೆಣ್ಣಿ ಮಾತನಾಡಿ, ನೀರು, ಗಾಳಿ, ಪರಿಸರ, ಮಣ್ಣಿನ ಆರೋಗ್ಯದಂಥ ಪ್ರಾಕೃತಿಕ ಅಂಶಗಳ ನಿರ್ವಹಣೆ, ರೋಗಗಳ ಅಪಾಯ ತಗ್ಗಿಸುವುದು, ನೈಸರ್ಗಿಕ ಪರಿಹಾರದ ಮೂಲಕ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದರಿಂದ ಮನುಷ್ಯ ಹಾಗೂ ಪ್ರಕೃತಿಗೆ ನೆರವಾಗಬೇಕು ಎಂದರು.

ಅಹಿಂದ ಜನತಾ ಸಂಘದ ಅಧ್ಯಕ್ಷ ಪ್ರಕಾಶ ಮೇಗೂರ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ಗದಗಿನ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು. ಕಾಡು ಮತ್ತು ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಅನ್ನು ತಡೆಗಟ್ಟಬೇಕು. ಶಾಲಾ ಕಾಲೇಜುಗಳಲ್ಲಿ ವನ್ಯಜೀವಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷಣ ನೀಡಬೇಕು ಎಂದರು.


ಪಿಡಿಒ ಪಾರ್ವತಿ ಹೊಂಬಳ, ಕಾರ್ಯದರ್ಶಿ ಚಾಂಧಮುನ್ನಿ ಅಣ್ಣಿಗೇರಿ, ಬಿಲ್‌ ಕಲೆಕ್ಟರ್ ಯಲ್ಲಪ್ಪ ಹಾದಿಮನಿ, ಪತ್ರಕರ್ತ ಲಕ್ಷ್ಮಣ ದೊಡ್ಡಮನಿ, ಅಹಿಂದ ಸಂಘದ ಪದಾಧಿಕಾರಿಗಳಾದ ಮಂಜುನಾಥ ನರಗುಂದ, ಶ್ರೀಕಾಂತ ಸಿರಗೇರಿ, ವೆಂಕಟೇಶ ಗದಗಿನ, ಭರಮಪ್ಪ ಮಂಗೋಜಿ, ರಾಜಾಭಕ್ಷಿ ಡಾಲಾಯತ, ಆದಿತ್ಯ ಗದಗಿನ, ಹರೀಶ ಯಲಭೋವಿ, ದಾವಲ ಬೆನಕೊಪ್ಪ, ಆಸೀಫ ತಾಂಬೋಟಿ, ಸಮೀರ ತಾಂಬೋಟಿ, ಬುಡ್ನೆಸಾಬ ಜಲಾಲನವರ, ಪ್ರವೀಣ ಅಡವಿಸೋಮಾಪುರ, ಶಬ್ಬೀರ ನಮಾಜಿ, ಅರುಣ ಚಿಲಕವಾಡ, ಶ್ರೀಧರ ಮಾಳಗಿ, ಅನೀಸ್ ತಾಂಬೋಟಿ, ಸೋಹಿಲ್ ದೊಡ್ಡಮನಿ, ಸಂತೋಷ ಸೊರಟೂರ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಇತರರು ಇದ್ದರು.