ಬೆಳೆವಿಮೆ, ಬೆಳೆನಷ್ಟ ಪರಿಹಾರದ ಹಣ ಸಾಲಕ್ಕೆ ಜಮಾ: ರೈತರ ಆಕ್ರೋಶ

| Published : May 25 2024, 12:51 AM IST

ಸಾರಾಂಶ

ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರೈತ ಸಂಘದ ನಿರಂತರ ಹೋರಾಟದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆವಿಮೆ, ಬೆಳೆನಷ್ಟ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಮಾಡುವ ಮಾಡುವ ರೈತರ ನೆರವಿಗೆ ಬಂದಿದೆ. ಆದರೂ ಸಹ ರೈತ ಸಮುದಾಯ ಸಂಕಷ್ಟದಿಂದ ಪಾರಾಗಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅವರು, ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ತಹಶೀಲ್ದಾರ್‌ಗೆ ರೈತ ಸಂಘದಿಂದ ನಾಲ್ಕು ಪ್ರಮುಖ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಿಸಿ ಮಾತನಾಡಿದರು.

ತಾಲ್ಲೂಕಿನ ಹಲವಾರು ಬ್ಯಾಂಕ್‌ಗಳಲ್ಲಿ ಸರ್ಕಾರದ ನೀಡಿದ ಪರಿಹಾರದ ಹಣವನ್ನು ಅವರ ಸಾಲಕ್ಕೆ ರೈತರನ್ನು ಕೇಳದೆ ಜಮಾ ಮಾಡಲಾಗುತ್ತಿದೆ. ಬ್ಯಾಂಕ್‌ನ ವ್ಯವಸ್ಥಾಪಕರು ಸರ್ಕಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ರೈತರಿಗೆ ದೇವರ ವರಕೊಟ್ಟರೂ ಪೂಜಾರಿ ವರಕೊಡಲಿಲ್ಲವೆನ್ನುವಂತಾಗಿದೆ. ಜಿಲ್ಲಾಧಿಕಾರಿಗಳು ಮೌಖಿಕವಾಗಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅದರ ಪಾಲನೆಯಾಗಿಲ್ಲ. ಆದ್ದರಿಂದ ತಾಲ್ಲೂಕು ಆಡಳಿತ ಈ ಬಗ್ಗೆ ಗಮನಹರಿಸಬೇಕು. ರೈತರು ಈಗಾಗಲೇ ಹಿಂಗಾರು ಹಂಗಾಮಿಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಎಲ್ಲಾ ರೀತಿಯ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳನ್ನು ಶೇ.೫೦ರ ರಿಯಾಯ್ತಿಯಲ್ಲಿ ರೈತರಿಗೆ ನೀಡಬೇಕು. ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಇದುವರೆಗೂ ದೊರಕದ ರೈತರನ್ನು ಪತ್ತೆಹಚ್ಚಿ ಕೂಡಲೇ ಅವರಿಗೆ ಪರಿಹಾರ ಕೊಡಿಸಬೇಕು, ಈ ಭಾಗದಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹೆಚ್ಚು ಇಳುವರಿ ಬರುವಂತಹ ಶೇಂಗಾ ಬಿತ್ತನೆ ಬೀಜಗಳನ್ನು ಸರ್ಕಾರ ವಿತರಣೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಆಗಾಗ ಕೈಕೊಡುತ್ತಿದ್ದು, ಕೃಷಿ ಪಂಪ್‌ಸೆಟ್‌ಗಳ ರೈತರಿಗೆ ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಹಾನ್‌ ಪಾಷ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳಿಸುವ ಭರವಸೆ ನೀಡಿದರು. ಬ್ಯಾಂಕ್ ಸಾಲಗಳಿಗೆ ರೈತರ ಹಣ ಜಮಾಕುರಿತು ಚರ್ಚಿಸುವ ಬಗ್ಗೆ ಕೂಡಲೇ ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಕರೆಯುವ ಭರವಸೆ ನೀಡಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್.ಬಸವರಾಜು, ತಿಪ್ಪೇಸ್ವಾಮಿ, ಪ್ರಕಾಶ್, ಹಿರೇಹಳ್ಳಿ ಯರ‍್ರಿಸ್ವಾಮಿ, ಎನ್.ದೇವರಹಳ್ಳಿ ರಾಜಣ್ಣ, ಬಿ.ಜಿ.ತಿಪ್ಪೇಸ್ವಾಮಿ, ಕೆ.ಜಯಣ್ಣ, ವೀರೇಶ್, ಸಣ್ಣಪಾಲಯ್ಯ, ನಾಗರಾಜ, ನಿಂಗಪ್ಪ, ಬೊಮ್ಮಯ್ಯ, ಸಣ್ಣಪಾಲಯ್ಯ, ಜಯಮ್ಮ, ರತ್ನಮ್ಮ, ಓಬಮ್ಮ, ಮಂಜಮ್ಮ, ಓಬಕ್ಕ ಮುಂತಾದವರು ಉಪಸ್ಥಿತರಿದ್ದರು.