ಸಾರಾಂಶ
ಚಳ್ಳಕೆರೆ: ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ.ವಿ.ರಾಮನ್ ನೀಡಿದ ಕೊಡುಗೆ ಅಪಾರವಾದದ್ದು. ಅವರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅಳವಡಿಸಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲೇ ಹಲವಾರು ಮಾದರಿ ರಚಿಸಿ ಪ್ರದರ್ಶಿಸುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಚಿತ್ರದುರ್ಗದ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಉಪನ್ಯಾಸಕ ಜಾನಕಿರಾಮ್ ತಿಳಿಸಿದರು.
ನಗರದ ಚುಂಚನಗಿರಿ ಎಜುಕೇಷನ್ ಟ್ರಸ್ಟ್ ಕುವೆಂಪು ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದು ನಗರ ವಿಶ್ವದ ಭೂಪಟದಲ್ಲಿ ಗುರುತಿಸಕೊಳ್ಳುವಂತೆ ಆಗಿದೆ. ಇದಕ್ಕೆ ಕಾರಣ ಇಲ್ಲಿ ಪ್ರಾರಂಭಗೊಂಡಿರುವ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು. ಡಿಆರ್ಡಿಒ, ಬಾರ್ಕ್, ಬಾಬಾ ಅಣು ಸಂಶೋಧನಾ ಸಂಸ್ಥೆಗಳು ವಿಶ್ವವೇ ನಮ್ಮತ್ತ ನೋಡುವಂತೆ ಮಾಡಿವೆ. ಇಂತಹ ಪ್ರತಿಷ್ಠಿತ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಅವಕಾಶ ಪಡೆಯುವಂತಾಗಬೇಕು. ಇದಕ್ಕೆ ನಿರಂತರ ಪರಿಶ್ರಮದ ಅಗತ್ಯವಿದೆ ಎಂದರು.
ಸಂಸ್ಥೆಯ ಸಹ ಕಾರ್ಯದರ್ಶಿ ಆರ್.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ವಿಚಾರವಂತಿಕೆ, ವೈಚಾರಿಕತೆ, ವಿಜ್ಞಾನ ವಿಷಯಗಳ ಬಗ್ಗೆ ಅರಿತುಕೊಳ್ಳಬೇಕು. ಯಾವುದೇ ವಿಷಯವಾದರೂ ಪ್ರಶ್ನಿಸುವ ಕೌಶಲ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ರೂಢಿಸಿಕೊಂಡಾಗ ಮಾತ್ರ ಬದುಕಿಗೆ ಅರ್ಥಬರುತ್ತದೆ. ಕಲಿಯುವ ಮನಸ್ಸು ಇರುವ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಿರುತ್ತಾನೆ. ಜೊತೆಗೆ ಮೌಢ್ಯತೆ ತೊರೆದು ನಿರಂತರ ಅಭ್ಯಾಸ, ಆಧುನಿಕ ಮೌಲ್ಯ, ಆಲೋಚನೆ, ಅಭಿರುಚಿಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬೆಳೆಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ನಿರ್ದೇಶಕ ಎಲ್.ವೆಂಕಟಪ್ಪ ವಹಿಸಿದ್ದರು. ಡಾ.ಸಿ.ಶಿವಲಿಂಗಪ್ಪ, ಆಡಳಿತಾಧಿಕಾರಿ ವಿ.ತಿಪ್ಪೇಸ್ವಾಮಿ, ಮುಖ್ಯೋಪಾಧ್ಯಾಯ ಎನ್.ತಿಪ್ಪೇಸ್ವಾಮಿ, ಶಿಕ್ಷಕರಾದ ಸಿ.ವೆಂಕಟೇಶ್, ಚಂದ್ರಶೇಖರ್, ಅಂಜನಮೂರ್ತಿ, ಓಂಕಾರಮ್ಮ, ಸುಶ್ಮಿತ, ಶಿವಕುಮಾರ್, ಅರವಿಂದ, ಅಶ್ವಿನಿ, ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.