ಸಾರಾಂಶ
ಹುಬ್ಬಳ್ಳಿ:
ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಇತ್ತ ವರೂರ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರ ನಂದಿ ಮಹಾರಾಜರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಗುಣಧರ ನಂದಿ ಮಹಾರಾಜರು, ಡಿ.ಕೆ. ಶಿವಕುಮಾರ ಮುಂದಿನ ಮುಖ್ಯಮಂತ್ರಿ ಆಗುವುದು ನನ್ನ ಕನಸಾಗಿದೆ. ಇದಕ್ಕಾಗಿ ಜೈನ್ ಆಚಾರ್ಯರು ಆಶೀರ್ವಾದ ಮಾಡುತ್ತೇವೆ ಎಂದರು. ಆಗ ವೇದಿಕೆ ಮೇಲಿದ್ದ ಜೈನ ಮುನಿಗಳು ಕೈ ಮೇಲೆ ಮಾಡಿ ಡಿಕೆಶಿಗೆ ಆಶೀರ್ವದಿಸಿದರು.
ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಶಿವಕುಮಾರ ಪಟ್ಟಷ್ಟು ಕಷ್ಟವನ್ನು ಯಾರೂ ಪಟ್ಟಿಲ್ಲ. ಇದನ್ನು ರಾಜ್ಯದ ಜನತೆ ಮರೆತಿಲ್ಲ. ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಅವರೊಬ್ಬ ಧರ್ಮನಿಷ್ಠ, ತ್ಯಾಗ ನಿಷ್ಠ ಎಂದರು.ಸರ್ಕಾರ ಜೈನ ನಿಗಮ ಮಂಡಳಿ ಸ್ಥಾಪಿಸಬೇಕೆಂದ ಶ್ರೀಗಳು, ಯಾವಾಗಲೂ ಕೊಡುವ ಕೈಗಳಾದ ಜೈನರು ಇದೇ ಮೊದಲ ಬಾರಿಗೆ ಸರ್ಕಾರದ ಬಳಿ ನಿಗಮ ಮಂಡಳಿಗೆ ಕೈಚಾಚಿದೆ. ಸರ್ಕಾರ ಸಮಾಜದ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.ನನ್ನ ಕರ್ತವ್ಯವಷ್ಟೇ ನಾನು ಮಾಡುತ್ತೇನೆ:
ನಾನು ನನ್ನ ಕರ್ತವ್ಯ ಮಾಡುತ್ತೇನೆ. ಮಿಕ್ಕಿದ್ದು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದರು.ಆಚಾರ್ಯ ಗುಣಧರ ನಂದಿ ಮಹಾರಾಜರು ನೀವು ಮುಖ್ಯಮಂತ್ರಿ ಆಗುತ್ತೀರಿ ಎಂದಿದ್ದಾರಲ್ಲ ಎಂಬ ಹೇಳಿಕೆಗೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಉತ್ತರಿಸಿದ ಅವರು, ಧರ್ಮ ಗುರುಗಳು ಆಶೀರ್ವಾದ ಮಾಡುವಾಗ ನಾವು ಏನು ಹೇಳಲು ಆಗಲ್ಲ. ಅದು ಅವರ ಇಚ್ಛೆ. ಏನೇ ಇದ್ದರೂ ನಮ್ಮ ಪಕ್ಷವಷ್ಟೇ. ಪಕ್ಷವೇ ಮುಖ್ಯ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಮಾಡುತ್ತೇವೆ. ನಾನು ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಏನು ಕೆಲಸ ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ನಾನು ಆತುರದಲ್ಲಿಲ್ಲ ಎಂದರು.
ಎಸ್.ಟಿ. ಸೋಮಶೇಖರ್ ಅವರು ನಿಮ್ಮ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಕೇಳಿದಾಗ, “ಅವರು ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ " ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದರು.