ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಶಿಕ್ಷಣವಂತರಾಗಿ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳು ಸಮುದಾಯದ ಪ್ರತಿಯೊಬ್ಬರಿಗೆ ದೊರೆಯುತ್ತವೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಕೇವಲ ದಲಿತ ಸಮುದಾಯದ ನಾಯಕರಷ್ಟೇ ಅಲ್ಲ. ಅವರು ಇಡಿ ಮಾನವ ಕುಲದ ಚೇತನರಾಗಿದ್ದಾರೆ. ದೇಶದ ಸಮಸ್ತ ಶೋಷಿತ ಜನಾಂಗದ ಅಭ್ಯದಯಕ್ಕಾಗಿ ಶ್ರಮಿಸಿದ್ದಾರೆ ಎಂದು ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಸಾಲೋಟಗಿ ಗ್ರಾಪಂ ಸದಸ್ಯ ಧರ್ಮರಾಜ ಸಾಲೋಟಗಿ ಹೇಳಿದರು.ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೋರೆಗಾಂವ ವಿಜಯೋತ್ಸವ ದಿನದ ನಿಮಿತ್ತ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಅಂಬೇಡ್ಕರ್ ಶಿಕ್ಷಣ ಹಾಗೂ ಸಂಘಟನೆ, ಹೊರಾಟ ಸೂತ್ರಗಳನ್ನು ನೀಡಿದ್ದಾರೆ. ಆದರೆ, ಮೊದಲ ಸೂತ್ರ ಬಿಟ್ಟು ಕೊನೆಯ ಸೂತ್ರವಾದ ಹೋರಾಟಕ್ಕೆ ಇಳಿದು, ಇತ್ತ ಶಿಕ್ಷಣವೂ ಪೂರ್ಣವಿಲ್ಲ. ಹೋರಾಟವೂ ಇಲ್ಲವೆಂಬಂತೆ ಆಗಿರುವುದು ಕಳವಳಕಾರ ಸಂಗತಿ. ಸಮುದಾಯ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಶಿಕ್ಷಣ ಅತಿಮುಖ್ಯ. ಕೇವಲ ಹೋರಾಟದಿಂದ ಮಾತ್ರ ಎಲ್ಲವೂ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಮಹಾರ ರೇಜಿಮೆಂಟಿನ 500 ಸೈನಿಕರು 2500 ಪೇಶ್ವೆ ಸೈನಿಕರ ವಿರುದ್ಧ ಹೋರಾಟ ಮಾಡಿ ವಿಜಯ ಸಾಧಿಸಿದ್ದಾರೆ. ಅಂತಹ ಶೂರ ವಂಶಸ್ಥರಾದ ಅಂಬೇಡ್ಕರ್ ಅನುಯಾಯಿಗಳು ಇಂದು ಶಿಕ್ಷಣದಿಂದ ವಂಚಿತರಾಗಿ, ಸರ್ಕಾರಿ ಸೌಲಭ್ಯದಿಂದ ವಂಚಿತಗೊಳ್ಳುತ್ತಿರುವುದು ನೋವಿನ ಸಂಗತಿ. ನಾವು ನಮ್ಮ ಇತಿಹಾಸ ಮೊದಲು ತಿಳಿಯಬೇಕು. ಕಡಿಮೆ ಸಂಖ್ಯೆಯಲ್ಲಿರುವ ಮಹಾರ್ ಸೈನಿಕರು ಅತೀ ದೊಡ್ಡ ಪೇಶ್ವೆ ಸೈನಿಕರನ್ನು ಸೋಲಿಸಿದ್ದರೂ ಸಹ ಯಾವ ಇತಿಹಾಸದಲ್ಲಿಯೂ ದಾಖಲಾಗಿಲ್ಲ. ಇತಿಹಾಸ ಸಂಪೂರ್ಣ ತಿರುಚಲಾಗಿದೆ. ಅಂಬೇಡ್ಕರ್ ಹೇಳುವ ಹಾಗೆ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಬದುಕಿನ ದಿನದಲ್ಲಿ ಸಮಾಜ, ದೇಶದ ಏಳಿಗೆಗಾಗಿ ಶ್ರಮಿಸಿ ಐತಿಹಾಸಿಕ ದಾಖಲೆ ನಿರ್ಮಿಸಬೇಕು ಎಂದು ಹೇಳಿದರು.ಉಪನ್ಯಾಸಕ ಶಿವಯೋಗೆಪ್ಪ ಮಾಡ್ಯಾಳ ಮಾತನಾಡಿ, ಕೊರೇಗಾಂವ್ ಯುದ್ಧ ಮಹರ್ ಜನಾಂಗದ ಮೇಲೆ ಪೇಶ್ವೆಗಳು
ನಡೆಸಿದ ದೌರ್ಜನ್ಯ ಹಾಗೂ ದಬ್ಬಾಳಿಕೆ ವಿರುದ್ಧ ನಡೆದ ಸ್ವಾಭಿಮಾನದ ಯುದ್ಧವಾಗಿದ್ದು, ಅದರ ವಿಜಯವೇ ಜ,1ಕೊರೇಗಾಂವ್ ವಿಜಯೋತ್ಸವ ಎಂದು ಹೇಳಿದರು.
ಶಾಸಕರ ಪುತ್ರ ವಿಠ್ಠಲಗೌಡ ಪಾಟೀಲ, ದಲಿತ ಮುಖಂಡ ವಿನಾಯಕ ಗುಣಸಾಗರ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ ಕಾಳೆ ಮಾತನಾಡಿದರು.ಕಾಂಗ್ರೆಸ್ ಮುಖಂಡ ಶೇಖರ ಶಿವಶರಣ, ಅವಿನಾಶ ಬಗಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ್ ಮೋಮಿನ್, ಪತ್ರಕರ್ತ ಶರಣಬಸಪ್ಪ ಕಾಂಬಳೆ, ಕಾಂಗ್ರೆಸ್ ಉಪ ವಿಭಾಗಮಟ್ಟದ ದೌರ್ಜನ್ಯ ಸಲಹಾ ಸಮಿತಿ ಸದಸ್ಯ ಶಿವಾನಂದ ಮೂರಮನ, ಉತ್ತಮ ಕಟ್ಟಿಮನಿ, ಸಂತೋಷ ಪರೇಶನವರ್, ರವಿ ಸಿಂಗೆ, ಸಿದ್ದು ಇಮ್ಮನದ್, ವಿನೋದ ಕಾಳೆ, ಆರ್.ಪಿ.ಐ ಯುವ ಘಟಕದ ಅಧ್ಯಕ್ಷ ಬಾಬು ಕಾಂಬಳೆ, ರವಿ ನಡಗಡ್ಡಿ, ಮಲ್ಲಿಕಾರ್ಜುನ ನಡಗಡ್ಡಿ, ಸುನೀಲ ಅಗರಖೇಡ, ರಾಜು ಹಳ್ಳದಮನಿ, ಜೈಭೀಮ ಸಿಂಗೆ, ಪ್ರಕಾಶ ಮಲಘಾಣ, ಶೆಟ್ಟೆಪ್ಪ ಶಿವಪೂರ, ದಸ್ತಗೀರ್ ಲಾಳಸಂಗಿ ಇತರರು ಇದ್ದರು.