ಸಾರಾಂಶ
ಹುಲಿಹೈದರ ಗ್ರಾಮದ ರೈತ ಶೇಖರಪ್ಪ ಎನ್ನುವವರು ಮೇ ೨೮ರಂದು ಪಟ್ಟಣದ ಲಲಿತಾ ಟ್ರೆಡರ್ಸ್ ಅಂಗಡಿಯಿಂದ 2 ಚೀಲ ಡಿಎಪಿ ರಸಗೊಬ್ಬರ ಖರೀದಿಸಿದ್ದಾರೆ. ಅಂಗಡಿಯವರು ೨ ಚೀಲಕ್ಕೆ ₹೨೯೦೦ ತೆಗೆದುಕೊಂಡಿದ್ದಾರೆ
ಕನಕಗಿರಿ: ಡಿಎಪಿ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಪಟ್ಟಣದ ಲಲಿತಾ ಟ್ರೇಡರ್ಸ್ ಅಂಗಡಿಯ ಪರವಾನಗಿಯನ್ನು ಕೃಷಿ ಇಲಾಖೆ ಅಮಾನತು ಮಾಡಿದೆ.
ಹುಲಿಹೈದರ ಗ್ರಾಮದ ರೈತ ಶೇಖರಪ್ಪ ಎನ್ನುವವರು ಮೇ ೨೮ರಂದು ಪಟ್ಟಣದ ಲಲಿತಾ ಟ್ರೆಡರ್ಸ್ ಅಂಗಡಿಯಿಂದ 2 ಚೀಲ ಡಿಎಪಿ ರಸಗೊಬ್ಬರ ಖರೀದಿಸಿದ್ದಾರೆ. ಅಂಗಡಿಯವರು ೨ ಚೀಲಕ್ಕೆ ₹೨೯೦೦ ತೆಗೆದುಕೊಂಡಿದ್ದಾರೆ. ೧ ಚೀಲಕ್ಕೆ ₹೧೩೫೦ ಪಡೆಯಬೇಕಿದ್ದ ಅಂಗಡಿಯ ಮಾಲೀಕರು ಪ್ರತಿ ಚೀಲಕ್ಕೆ ₹೧೪೫೦ ಪಡೆದಿದ್ದಾರೆ. ₹೧೦೦ ಹೆಚ್ಚುವರಿ ಹಣ ಪಡೆದಿದ್ದರಿಂದ ರೈತ ಶೇಖರಪ್ಪ ಅಂಗಡಿ ಹೆಸರಿನಲ್ಲಿರುವ ಬಿಲ್ ಸಮೇತ ತಾಲೂಕು ಕೃಷಿ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದರು.ರೈತನ ದೂರಿನ ಮೇಲೆ ಸ್ಥಳೀಯ ಕೃಷಿ ಅಧಿಕಾರಿ ಹಾಗೂ ತಾಲೂಕು ಸಹಾಯಕ ನಿರ್ದೇಶಕರು ಕೂಲಂಕಷವಾಗಿ ಪರಿಶೀಲಿಸಿ ಟ್ರೇಡರ್ಸ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದ್ದು, ೧೯೮೫ರ (೩)(೪) ನಿಯಮ ಉಲ್ಲಂಘನೆಯಾಗಿದೆ ಎಂದು ಕಚೇರಿ ಆದೇಶದಲ್ಲಿ ಉಲ್ಲೇಖವಾಗಿದೆ. ಇನ್ನೂ ಶೋಕಾಸ್ ನೋಟಿಸ್ ತಲುಪಿದ ೨೪ ಗಂಟೆಯೊಳಗೆ ಅಂಗಡಿ ಮಾಲೀಕರು ಸಲ್ಲಿಸಿದ ಸಮಜಾಯಿಷಿ ಸಮಂಜಸವಾಗಿಲ್ಲ. ೧೯೮೫ ಹಾಗೂ ೧೯೫೫ರ ನಿಯಮಗಳು ಉಲ್ಲಂಘಿಸಿರುವುದನ್ನು ಪರಿಗಣಿಸಿ, ಕೃಷಿ ಪರಿಕರ ಮಾರಾಟ ಅಂಗಡಿ ಮಳಿಗೆ ಪರವಾನಗಿ ಮುಂದಿನ ೨೧ ದಿನಗಳ ವರೆಗೆ ಅಮಾನತಿನಲ್ಲಿ ಆದೇಶ ಹೊರಡಿಸಲಾಗಿದೆ.