ಕನ್ನಡಪ್ರಭ ವಾರ್ತೆ ತುಮಕೂರು ಕೊರಟಗೆರೆ ತಾಲೂಕಿನ ಬೋರಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಪುನೀತ್ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ಗೆ ಒಳಗಾಗಿ ದುರ್ಮರಣ ಹೊಂದಿರುವುದು ಅತ್ಯಂತ ದುಃಖಕರ ಹಾಗೂ ಖಂಡನೀಯ ಸಂಗತಿಯಾಗಿದೆ. ಜಿಲ್ಲಾಡಳಿತ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಕಾರ್ಯದರ್ಶಿ ಓಂಕಾರ್ ಒತ್ತಾಯಿಸಿದ್ದಾರೆ. ಪರಿಶಿಷ್ಟ ಜನಾಂಗದ ಭೋವಿ ಸಮುದಾಯದ ಅಮಾಯಕ ವಿದ್ಯಾರ್ಥಿ ಪುನೀತ್ ತನ್ನ ತಂದೆ ತಾಯಿಯ ಏಕೈಕ ಮಗನಾಗಿದ್ದ. ತಂದೆ ಕಟ್ಟಡ ಕಾರ್ಮಿಕರಾಗಿ ದಿನಗೂಲಿ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದು, ಮಗನನ್ನು ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಿಸುವ ಕನಸು ಕಂಡಿದ್ದರು. ಭವಿಷ್ಯದಲ್ಲಿ ಕುಟುಂಬಕ್ಕೆಆಸರೆಯಾಗಬೇಕಿದ್ದ ಆ ಪುಟ್ಟಜೀವ ಇಂದು ನಿರ್ಲಕ್ಷ್ಯದ ಬಲಿಯಾಗಿರುವುದು ಕುಟುಂಬದ ಪಾಲಿಗೆ ಎಂದಿಗೂ ತುಂಬಲಾಗದ ನಷ್ಟವಾಗಿದೆ. ಘಟನೆ ಹಿನ್ನೆಲೆಯಲ್ಲಿ ಓಂಕಾರ್ ಅವರು ಡಿಡಿಪಿಐ ಹಾಗೂ ಬಿಇಒ ಅವರೊಂದಿಗೆ ಬೋರಪ್ಪನಹಳ್ಳಿಯ ಮೃತ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಿಕ್ಷಣ ಇಲಾಖೆ, ಬೆಸ್ಕಾಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಯಾವುದೇ ನಿರ್ಲಕ್ಷ್ಯ ಕಂಡು ಬಂದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯದಿಂದ ಅಮಾಯಕ ವಿದ್ಯಾರ್ಥಿಯ ಜೀವ ಬಲಿಯಾದರೆ ಅದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು ಎಂದು ಡಿಡಿಪಿಐಗೆ ಹೇಳಿದರು. ಘಟನೆ ಕುರಿತು ಉನ್ನತ ಮಟ್ಟದ, ಸಮಯ ಬದ್ಧ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿ ಪುನೀತ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೋರಪ್ಪನಹಳ್ಳಿ ವಿದ್ಯಾರ್ಥಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆಆಗ್ರಹ
ಜಿಲ್ಲಾಡಳಿತ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಕಾರ್ಯದರ್ಶಿ ಓಂಕಾರ್ ಒತ್ತಾಯಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.