ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೆಹಲಿಯಲ್ಲಿ ನಡೆದ ಕಾರು ಬಾಂಬ್ ಬ್ಲಾಸ್ಟ್ ಗೆ ಭದ್ರತಾ ವೈಫಲ್ಯವೇ ಕಾರಣವೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕೆಂಪುಕೋಟೆ ಹತ್ತಿರವೇ ಬಾಂಬ್ ಬ್ಲಾಸ್ಟ್ ಆಗಿದೆ, ಶಂಕಿತ ಉಗ್ರರು ವೃತ್ತಿಯಲ್ಲಿ ವೈದ್ಯರಾಗಿರುವುದು ದುರಂತ ಎಂದರು. ಯಾರೋ ಹೊಟ್ಟೆಗಿಲ್ಲದವರು, ಕಷ್ಟದಲ್ಲಿರುವವರು ಈ ಕೃತ್ಯ ಮಾಡಿಲ್ಲ,

ಎಂಜಿನಿಯರ್ ಗಳು, ಡಾಕ್ಟರ್ ಗಳೇ ಉಗ್ರ ಕೃತ್ಯ ಎಸಗುತ್ತಿರುವುದು ದುರಂತ, ಅವರಿಗೆ ದೇವರು ಏನು ಬುದ್ದಿ ಕೊಟ್ಟಿದ್ದಾನೋ ಅರ್ಥ ಆಗ್ತಿಲ್ಲಾ ಎಂದರು‌. ಬಿಹಾರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ನಲ್ಲಿ ಎನ್‌ಡಿಎ ಗೆ ಬಹುಮತ ವಿಚಾರಕ್ಕೆ ಮಾತನಾಡಿ, 14ರಂದು ಫಲಿತಾಂಶ ಬರುತ್ತಿದೆ ನೋಡೋಣ, ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಹಾಗೂ ಮಹಾಘಟಬಂಧನ್ ನಡುವೆ ಅಂತರ ಕಡಿಮೆ ಇದೆ, ನಾವೇ ಜಾಸ್ತಿ ಸ್ಥಾನ ಗೆಲ್ಲುವ ವಿಶ್ವಾಸ ಇದೆ, ನಮಗೂ ಅವರಿಗೂ 10ರಿಂದ 12 ಸ್ಥಾನಗಳಲ್ಲಿ ವ್ಯತ್ಯಾಸ ಬರುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಫೋಟೋ ಹರಿದು ಬುದ್ಧನ ಪುತ್ಥಳಿ ವಿರೂಪಗೊಳಿಸಿದ ಪ್ರಕರಣ ಕುರಿತು ಮಾತನಾಡಿ, ಪೊಲೀಸರು ಸರಿಯಾದ ಸಾಕ್ಷ್ಯಾಧಾರವನ್ನು ಇಟ್ಟುಕೊಂಡೆ ಆರೋಪಿಗಳನ್ನು ಬಂಧಿಸಿದ್ದಾರೆ. ವಾಲ್ಮೀಕಿ ಸಮುದಾಯದವರು ಯಾಕೆ ಪ್ರತಿಭಟನೆ ಮಾಡ್ತಾರೆ ಎಂಬುದು ನನಗೆ ತಿಳಿದಿಲ್ಲ, ವಿಚಾರಿಸುತ್ತೇನೆ ಎಂದು ತಿಳಿಸಿದರು.