ಸಾರಾಂಶ
ಉಡುಪಿ : ನೀಟ್ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವಾಗ ಶಿಕ್ಷಣ ಸಚಿವರು ಹಗರಣವಾಗಿಲ್ಲ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ಅವರು ಮೊದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ತಾಹೀರ್ ಹುಸೇನ್ ಆಗ್ರಹಿಸಿದರು.
ಅವರು ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಎಸ್.ಐ.ಓ. ಉಡುಪಿ ಜಿಲ್ಲಾ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ವರದಿಗಳ ಪ್ರಕಾರ ಮೂವತ್ತು ಲಕ್ಷ ರು.ಗಳಿಗೆ ಪ್ರಶ್ನಾ ಪತ್ರಿಕೆ ಮಾರಟವಾಗಿದೆ. ಸರಕಾರಕ್ಕೆ ಒಂದು ಚೂರು, ಮಾನ ಮಾರ್ಯದೆ ಇಲ್ಲ. ಪಿಯುಸಿ ಫಲಿತಾಂಶದಲ್ಲಿ ಉತ್ತೀರಣರಾಗದವರು ನೀಟ್ ರ್ಯಾಂಕ್ ಪಡೆಯುವುದು ಜನರ, ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನಾ ಪತ್ರಿಕಾ ಅವ್ಯವಹಾರ ನಡೆಸಿ ಚುನಾವಣೆ ಫಲಿತಾಂಶ ಸಂದರ್ಭದಲ್ಲಿ ರಿಸಲ್ಟ್ ಬಿಡುಗಡೆ ಮಾಡಿ, ಈ ಅವ್ಯವಹಾರ ಚರ್ಚೆಯಾಗದಂತೆ ನೋಡಿಕೊಳ್ಳಲಾಗಿದೆ. 5-6 ಜನ ರ್ಯಾಂಕ್ ಬರುವಲ್ಲಿ 60-65 ಜನ ರ್ಯಾಂಕ್ ಗಳಿಸಿರುವುದು ಈ ಹಗರಣಕ್ಕೆ ಸಾಕ್ಷಿ. ಈ ಅವ್ಯವಹಾರ ಪೂರ್ವ ನಿಯೋಜಿತ ಎಂದವರು ಆರೋಪಿಸಿದರು.
ಎಸ್.ಐ.ಓ. ರಾಜ್ಯ ಕಾರ್ಯದರ್ಶಿ ಸಮೀರ್ ಪಾಶ ಮಾತನಾಡಿ, ಕಳೆದ ಏಳು ವರ್ಷದಲ್ಲಿ 70 ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರತಿ ಬಾರಿ ಪೇಪರ್ ಲೀಕ್ ಆಗುತ್ತಿದ್ದರೂ ಸರ್ಕಾರ ತಡೆಯುವಲ್ಲಿ ವಿಫಲವಾಗಿದೆ. ಕೋಚಿಂಗ್ ಮಾಫಿಯಾಕ್ಕಾಗಿ ಇಂತಹ ಅಕ್ರಮಗಳು ನಡೆಯುತ್ತಿದೆ ಎಂದರು.
ಎಸ್.ಐ.ಓ. ರಾಜ್ಯ ಕಾರ್ಯದರ್ಶಿ ಅಫ್ವಾನ್ ಬಿ. ಹೂಡೆ ಮಾತನಾಡಿ, ಮೋದಿಯವರು ಪಾರದರ್ಶಕ ಪರೀಕ್ಷೆ ಕುರಿತು ಮಾತನಾಡುತ್ತಾರೆ. ಇದೀಗ ಅವರು ಈ ಹಗರಣದ ಕುರಿತು ಮಾತನಾಡಲಿ. ಅವರ ಶಿಕ್ಷಣ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಲಿ. ಈ ನೀಟ್ ಪರೀಕ್ಷೆಯನ್ನು ರದ್ದು ಮಾಡಿ ರಾಜ್ಯಗಳು ಫೆಡರಲ್ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಬೇಕು ಎಂದಿ ಆಗ್ರಹಿಸಿದರು. .
ಎಸ್.ಐ.ಓ ಉಡುಪಿ ಜಿಲ್ಲಾಧ್ಯಕ್ಷರಾದ ಆಯಾನ್ ಮಲ್ಪೆ, ಕ್ಯಾಂಪಸ್ ಕಾರ್ಯದರ್ಶಿ ಔಸಾಫ್ ಹೂಡೆ, ಮುಝೈನ್ ಆದಿ ಉಡುಪಿ, ನಿಫಾಲ್ ಕಿದಿಯೂರು, ನಿಹಾಲ್ ಕಿದಿಯೂರು, ಎಪಿಸಿಆರ್ ಹುಸೇನ್ ಕೋಡಿಬೆಂಗ್ರೆ, ರಿಝ್ವಾನ್, ಸಫಾನ್ ಮಲ್ಪೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮೀರ್ ತೀರ್ಥಹಳ್ಳಿ ನಿರೂಪಿಸಿದರು.