ಹನುಮಸಾಗರ: ಹನುಮಸಾಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ಹನುಮಸಾಗರ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ಪಡೆಯಲು ಅವಕಾಶವಿದೆ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹನುಮಸಾಗರದಲ್ಲೇ ಸರ್ಕಾರಿ ಡಿಗ್ರಿ ಕಾಲೇಜು ಸ್ಥಾಪಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದೇವಣ್ಣನವರ ಮಾತನಾಡಿ, ಸುಮಾರು 25 ರಿಂದ 30 ಗ್ರಾಮಗಳಿಗೆ ಶೈಕ್ಷಣಿಕ ಕೇಂದ್ರವಾಗಿದ್ದರೂ ಪದವಿ ಕಾಲೇಜಿನ ಕೊರತೆಯಿಂದ ವಿದ್ಯಾರ್ಥಿಗಳು ಇಲಕಲ್,ಗಜೇಂದ್ರಗಡ, ಕುಷ್ಟಗಿ, ಕೊಪ್ಪಳ, ಗಂಗಾವತಿ ಹಾಗೂ ಹುಬ್ಬಳ್ಳಿ ಸೇರಿದಂತೆ ದೂರದ ಊರುಗಳಿಗೆ ತೆರಳಿ ವ್ಯಾಸಂಗ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದು, ಹಲವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಣ ಪ್ರೇಮಿಗಳು ಮಾತನಾಡಿ, ಪಟ್ಟಣ ಪಂಚಾಯತಿಯಾಗಿ ಬೆಳೆಯುತ್ತಿರುವ ಹನುಮಸಾಗರದಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಅಗತ್ಯವಾಗಿದೆ. ಡಿಗ್ರಿ ಕಾಲೇಜು ಸ್ಥಾಪನೆಯಾದರೆ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಈ ಭಾಗದ ಶೈಕ್ಷಣಿಕ ಪ್ರಗತಿಗೆ ಹೊಸ ದಿಕ್ಕು ದೊರೆಯಲಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಹನುಮಸಾಗರ ಭಾಗದಲ್ಲಿ ಸರ್ಕಾರಿ ಪದವಿ (ಡಿಗ್ರಿ) ಕಾಲೇಜಿನ ಅವಶ್ಯಕತೆ ಹೆಚ್ಚಿದ್ದು, ಅದನ್ನು ಮಂಜೂರು ಮಾಡಿಸಲು ಖಂಡಿತ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.


ಶರಣಪ್ಪ ಬೋದೂರ, ರಮೇಶ ಬಡಗೇರ, ಹುಲಪ್ಪ ಮೇಟಿ, ನಾಗರಾಜ ಹಕ್ಕಿ, ಶರಣಗೌಡ ಗೌಡ್ರ, ಮಹಾಂತೇಶ ಬೀಳಗಿ, ವಿಜಯಕುಮಾರ ಕುಷ್ಟಗಿ, ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.