ಗುದ್ನೇಶ್ವರ ದೇವಸ್ಥಾನದಲ್ಲಿ ಕೋರ್ಟ ಸಹ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಸೇವಾದಾರರಿಗೆ ನೀಡಿಲ್ಲ. ಅದರ ಬದಲು ಅಧಿಕಾರಿಗಳು ಸೂಚಿಸಿರುವ ಬೇರೆ ಭೂಮಿಯನ್ನು ಸೇವಾದಾರರ ಭೂಮಿ ಎಂದು ಆದೇಶಿಸಿದೆ.
ಕುಕನೂರು: ಗುದ್ನೇಶ್ವರಸ್ವಾಮಿ ಸೇವಾದಾರರಿಗೆ ಸಾಗುವಳಿ ಭೂಮಿ ನೀಡದೆ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ತೀರಾ ಖಂಡನೀಯ, ಪ್ರಜಾಸೌಧಕ್ಕೆ ಶುಕ್ರವಾರ ಭೂಮಿ ಪೂಜೆ ಮಾಡಿರುವುದು ಅವರ ಕುಣಿ (ಸಮಾಧಿ) ಅವರೇ ತೆಗೆದುಕೊಂಡಂತೆ ಎಂದು ನೀಲಗುಂದ-ಗುದ್ನೇಪ್ಪನಮಠದ ಶ್ರೀಪ್ರಭುಲಿಂಗ ದೇವರು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲಾಧಿಕಾರಿಗಳು ಗುದ್ನೇಪ್ಪನ ಮಠದಲ್ಲಿ ಶುಕ್ರವಾರ ಪ್ರಜಾಸೌಧಕ್ಕೆ ಭೂಮಿ ಪೂಜೆ ನೆರವೇರಿಸಿದ್ದನ್ನು ಕಟುವಾಗಿ ಖಂಡಿಸಿದರು.ಗುದ್ನೇಶ್ವರ ದೇವಸ್ಥಾನದಲ್ಲಿ ಕೋರ್ಟ ಸಹ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಸೇವಾದಾರರಿಗೆ ನೀಡಿಲ್ಲ. ಅದರ ಬದಲು ಅಧಿಕಾರಿಗಳು ಸೂಚಿಸಿರುವ ಬೇರೆ ಭೂಮಿಯನ್ನು ಸೇವಾದಾರರ ಭೂಮಿ ಎಂದು ಆದೇಶಿಸಿದೆ. ಇದು ತಪ್ಪು ಆದೇಶ. ಸೇವಾದಾರರ ಸಾಗುವಳಿ ಭೂಮಿ ಸೇವಾದಾರರಿಗೆ ನೀಡಬೇಕು. ಸಾಗುವಳಿ ಮಾಡುತ್ತಿದ್ದ ಕುರುಹು ನಮ್ಮ ಬಳಿ ಇವೆ. ಕೆರೆ, ತಿಪ್ಪೆಯನ್ನು ಸೇವಾದಾರರ ಭೂಮಿಯೆಂದು ನಮೂದಿಸಿರುವುದು ತಪ್ಪು. ಅದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ಮೇಲ್ಮನವಿ ಹೋಗಿದ್ದೇವೆ. ಇದರ ಮಧ್ಯೆ ಪ್ರಜಾಸೌಧಕ್ಕೆ ಭೂಮಿ ಪೂಜೆ ಮಾಡಿರುವುದು ಯಾವ ನ್ಯಾಯ? ಸ್ಥಳೀಯ ಶಾಸಕರು ಗುದ್ನೇಶ್ವರ ದೇವಸ್ಥಾನ ಭೂಮಿ ಬಿಟ್ಟು ಬೇರೆ ಧರ್ಮದ ಒಂದು ಎಕರೆ ಭೂಮಿ ತೆಗೆದುಕೊಳ್ಳಲಿ ನೋಡೋಣ? ಗುದ್ನೇಶ್ವರ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸ ಇದೆ. ಇನ್ನೆರೆಡು ವರ್ಷದಲ್ಲಿ ಇದರ ಹಿಂದಿರುವ ಶಾಸಕರು, ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಶ್ರೀಗಳು ಕಿಡಿಕಾರಿದರು.
ದೇವಸ್ಥಾನ ಭೂಮಿ ಖರೀದಿ ಆಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಹಿಂದೆ ದೇವಸ್ಥಾನ ಜಾಗವನ್ನು ಬೇರೆಯವರಿಗೆ ಶಾಸಕರೇ ನಿಂತು ಖರೀದಿ ಮಾಡಿಸಿದ್ದಾರೆ. ಅಭಿವೃದ್ಧಿ ಹರಿಕಾರ ಎಂದು ಕರೆಯಿಸಿಕೊಳ್ಳುವ ಶಾಸಕರು ಬೇರೆ ಕಡೆ ಜಾಗ ಹಿಡಿದು ಕಟ್ಟಡ ನಿರ್ಮಿಸಲಿ, ಬೇಕಾದರೆ ದೇವಸ್ಥಾನ ಅಭಿವೃದ್ಧಿ ಮಾಡಲಿ. ಮೋಸದಿಂದ ಈ ಕಟ್ಟಡ ಕಟ್ಟಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ಸೇವಾದಾರರು ತಮ್ಮ ವಂಶದವರಿಗೆ ಆಸ್ತಿ ಇರಲಿ ಎಂದು ಹೇಳಿಲ್ಲ, ದೇವಸ್ಥಾನ ಅಭಿವೃದ್ಧಿಗೆ ಕೊಡಲು ಮುಂದಾಗಿದ್ದಾರೆ. ಆದರೆ ಸೇವಾದಾರರು ಉಳುಮೆ ಮಾಡುತ್ತಿದ್ದ ಭೂಮಿಯಲ್ಲಿ ಪ್ರಜಾಸೌಧ ಹಾಗೂ ಇತರೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ತಪ್ಪು ಎಂದರು.
ಈ ಸಂದರ್ಭದಲ್ಲಿ ಸಿದ್ಲಿಂಗಯ್ಯ ಬಂಡಿ, ಶರಣಯ್ಯ ಹುಣಸಿಮರ, ರುದ್ರಯ್ಯ ಇನಾಮದಾರ, ಚನ್ನಬಸಯ್ಯ ಧೂಪದ, ವೀರಯ್ಯ ಇತರರಿದ್ದರು.