-ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ । ರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ, ನೆರವಿಗೆ ಆಗ್ರಹ
---ಕನ್ನಡಪ್ರಭ ವಾರ್ತೆ ಯಾದಗಿರಿ
ರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ ಮತ್ತು ನೆರವು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ ಮತ್ತು ನೆರವು ನೀಡಬೇಕೆಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಯಾದಗಿರಿ ಜಿಲ್ಲಾ ಸಂಘಟನಾ ಸಮಿತಿಯಿಂದ ನಗರದ ಸುಭಾಷ್ ವೃತ್ತದಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ತುಂಬಾ ಕಡಿಮೆ ಮಳೆ ಕೊರತೆಯಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕೆರೆ, ಕೊಳಗಳು ಬತ್ತಿವೆ. ಬೋರ್ವೆಲ್ಗಳು ವಿಫಲವಾಗಿವೆ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ರೈತರು ಅಲ್ಪಸ್ವಲ್ಪ ಮಳೆ ಆಗಿದ್ದು, ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣವಾಗಿ ಮಳೆಯ ಕೊರತೆಯಿಂದ ಹಾಗೂ ಅತಿ ಹೆಚ್ಚು ಉಷ್ಣಾಂಶತೆಯಿಂದ ನಶಿಸುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಕೆಲಸವಿಲ್ಲದೆ ರೈತರು ಮತ್ತು ಕೃಷಿ ಕಾರ್ಮಿಕರು ಜೀವನೋಪಾಯಕ್ಕಾಗಿ ಇತರ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ, ಈಗಾಗಲೇ ರೈತರು ಕೃಷಿಗೆ ಮಾಡಿದ ಸಾಲದ ಹೊರೆ ತಾಳಲಾರದೆ ಜಿಲ್ಲೆಯಲ್ಲಿ ಮೂರು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳೇ, ಯಾದಗಿರಿ ಜಿಲ್ಲೆ ಕೃಷಿ ಮತ್ತು ಬರಕ್ಕೆ ಹೆಸರಾದ ಜಿಲ್ಲೆ. ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ತಾವು ಕೂಡಲೇ ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲನೆ ನಡೆಸಿ ಸಮಗ್ರ ವರದಿ ಸಂಗ್ರಹಿಸಿ ಯೋಗ್ಯ ಪರಿಹಾರ ಕೊಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ, ಇದನ್ನು ರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ ಮತ್ತು ನೆರವು ರೈತ ಕೃಷಿ ಕಾರ್ಮಿಕರ ಸಂಘಟನೆ
ಯಾದಗಿರಿ ಜಿಲ್ಲಾ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದರು.ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್ ಮಾತನಾಡಿ, ಹಳ್ಳಿಗಳಲ್ಲಿ ರೈತ ಕಾರ್ಮಿಕರು ಕೃಷಿ ಚಟುವಟಿಕೆಗಳಿಲ್ಲದೆ ಕಂಗಾಲಾಗಿದ್ದಾರೆ. ಈಗ ಮಾಡಲು ನರೇಗಾ ಕೆಲಸ ನೀಡಬೇಕು ಹಾಗೂ ಎರಡು ನೂರು ದಿನಗಳ ಕೆಲಸ ಕೊಡಬೇಕು. ದಿನಗೂಲಿ ೬೦೦ ಹೆಚ್ಚಳ ಮಾಡಬೇಕು. ಮಳೆಗಾಲ ಆರಂಭವಾಗಿ ೨ ತಿಂಗಳಾದರೂ ಕೂಡ ಮಳೆ ಬಾರದೆ ಬೆಳೆಗಳು ನಶಿಸಿಹೋಗಿವೆ. ಹಾವೇರಿ ಜಿಲ್ಲೆಯಲ್ಲಿ ಮೋಡಬಿತ್ತನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇರುವ ಜನ ನಾಯಕರು ನಿದ್ದೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೂಡ ಮೋಡ ಬಿತ್ತನೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು, ಪತ್ರಿಕೆಯ ವರದಿ ಪ್ರಕಾರ ೧೫೭ ತಾಲೂಕುಗಳಲ್ಲಿ ಬರದ ಛಾಯೆ ಎಂಬ ವರದಿ ಇದ್ದರೂ ಇಲ್ಲಿಯವರೆಗೂ ರಾಜ್ಯದಲ್ಲಿ ಸರ್ಕಾರ ಯಾವುದೇ ವರದಿ ಸಂಗ್ರಹಿಸಲು ಮುಂದಾಗದೆ ಇರುವುದು ಮೇಲ್ನೋಟಕ್ಕೆ ಎದ್ದು ಕಾಣ ಸುತ್ತದೆ ಹೀಗಾದರೂ ಸರ್ಕಾರ ಎಚ್ಚೆತ್ತುಕೊಂಡು ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೇ ಎಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸಿದ್ದಪ್ಪ ಬಡಿಗೇರ್, ಇಮ್ಲಾಪುರ್, ಸುಭಾಷ್ಚಂದ್ರ ಬಾವನೋರ್, ಭೀಮರೆಡ್ಡಿ ಹಿರೇಬಾನರ್, ಮಲ್ಲಣಗೌಡ, ರಾಜು ಇಮ್ಲಾಪುರ್, ಕಾರ್ಮಿಕ ನಾಯಕಿ ಡಿ.ಉಮಾದೇವಿ, ನಾಗರಾಜ, ಎಸ್ ಚಂದ್ರರೆಡ್ಡಿ ಅಲ್ಲಿಪುರ್, ಅಂಬರೀಶ ದಣ , ಸುರೇಶ ಚಳಗೇರಿ, ರಾಮರೆಡ್ಡಿ ಸಿಂಗನಹಳ್ಳಿ, ಖಾಜಾ ಪಾಷ ಹುಳಕಲ್, ವೀರೇಶ ಗೂಳಿ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.ಪ್ರಮುಖ ಬೇಡಿಕೆಗಳುಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ತಕ್ಷಣವೇ "ತೀವ್ರ ಬರಪೀಡಿತ " ಎಂದು ಘೋಷಿಸಬೇಕು.
ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ೨೦೦ ದಿನಗಳ ಕೆಲಸ ಹಾಗೂ ದಿನಕ್ಕೆ ₹೬೦೦ ಕೂಲಿ ನೀಡಬೇಕು, ಗ್ರಾಮೀಣ ಪ್ರದೇಶದಲ್ಲಿ ತಕ್ಷಣವೇ ಕೂಲಿ ಕೆಲಸ ಪ್ರಾರಂಭಿಸಬೇಕು.ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಖಾಸಗಿ ಸಾಲ ಸೇರಿದಂತೆ ಎಲ್ಲಾ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸಾಲ ವಸೂಲಾತಿಯನ್ನು ತಡೆ ಹಿಡಿಯಬೇಕು.
ಯಾದಗಿರಿ ಜಿಲ್ಲೆಯ ಎಲ್ಲ ಕೆರೆಗಳಿಗೆ ಕೃಷ್ಣಾ ಮತ್ತು ಭೀಮಾ ನದಿಗಳಿಂದ ಹಾಗೂ ಮೇಲಿನ ಜಲಾಶಯಗಳಿಂದ ಜಿಲ್ಲೆಯ ಎಲ್ಲಾ ಕಾಲುವೆಗಳ ಮೂಲಕ ಕೆರೆಗಳಿಗೆ ನೀರನ್ನು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು.ಬೆಳೆ ನಷ್ಟ ಪರಿಹಾರವನ್ನು ಪ್ರತಿ ಎಕರೆಗೆ ೫೦ ಸಾವಿರ ರೂಪಾಯಿ ಪರಿಹಾರ ನೀಡಬೇಕು.
ಯಾದಗಿರಿ ಜಿಲ್ಲೆಗೆ ಮೋಡ ಬಿತ್ತನೆ ಪ್ರಾರಂಭಿಸಬೇಕು.ಫೋಟೊರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ ಮತ್ತು ನೆರವು ನೀಡಬೇಕೆಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಯಾದಗಿರಿ ಜಿಲ್ಲಾ ಸಂಘಟನಾ ಸಮಿತಿಯಿಂದ ನಗರದ ಸುಭಾಷ್ ವೃತ್ತದಲಿ ಪ್ರತಿಭಟನೆ ನಡೆಸಲಾಯಿತು.