ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬರ ನಿರ್ವಹಣೆ, ಡೆಂಘೀ ಮತ್ತು ಮಾನ್ಸೂನ್ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ, ಕುಡಿಯುವ ನೀರಿನ ಬಗ್ಗೆ ಪ್ರತಿಯೊಂದು ಇಲಾಖೆಗಳು ಸರಿಯಾದ ಸ್ವಚ್ಛತೆಯ ಕ್ರಮ ವಹಿಸಬೇಕು. ಅಂಗನವಾಡಿ, ಶಾಲೆ ಮತು ಹಾಸ್ಟೆಲ್ಗಳಲ್ಲಿ ನೀರಿನ ಟ್ಯಾಂಕ್ಗಳನ್ನು ಸ್ವಚ್ಛ ಮಾಡಿ ಬಳಸಬೇಕು ಎಂದು ತಹಸೀಲ್ದಾರ್ ಎಂ.ಎನ್.ಗಿರೀಶ್ ಸೂಚನೆ ನೀಡಿದರು.ಶಿವಮೊಗ್ಗ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕಿನ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬರ ಪರಿಹಾರ ಕೆಲಸದಲ್ಲಿ ರೈತರು ಕಚೇರಿಗೆ ಭೇಟಿ ನೀಡಿದಾಗ ಸಮಾಧಾನ, ಸಂಯಮದಿಂದ ಕೆಲಸ ಮಾಡಿಕೊಡಿ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮಗೆ ನಿರ್ವಹಿಸಿದ ಕೆಲಸವನ್ನು ನಿಷ್ಠೆ ಮತ್ತು ಜವಾಬ್ದಾರಿಯಿಂದ ಮಾಡಬೇಕು ಎಂದು ತಾಕೀತು ಮಾಡಿದರು.
ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರು ಪರೀಕ್ಷಿಸಿ ಬಳಸಬೇಕು. ಶೌಚಾಲಯಗಳ ಶುಚಿತ್ವದಿಂದ ಕಾಪಾಡಿಕೊಂಡು ಮಕ್ಕಳನ್ನು ಆರೋಗ್ಯವಂತರಾಗಿಡುವುದು ನಮ್ಮ ಕರ್ತವ್ಯ. ಎಲ್ಲರು ಡೆಂಘೀಯಿಂದ ರಕ್ಷಣೆಗೆ ಸುರಕ್ಷಿತ ಕ್ರಮ ತೆಗೆದುಕೂಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಶಾಲೆ ಮತ್ತು ಅಂಗನವಾಡಿಗಳಿಗೆ ಬಣ್ಣ ಬಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಅಪಾಯಕಾರಿ ಮರಗಳ ತೆರವುಗೊಳಿಸಿ:
ಮಾನ್ಸೂನ್ ಹೆಚ್ಚುವ ಕಾರಣ ಅರಣ್ಯ ಇಲಾಖೆಯವರು ರಸ್ತೆ ಬದಿಯ ಮತ್ತು ಅಪಾಯಕಾರಿ ಸ್ಥಿತಿಯಲ್ಲಿನ ಮರಗಳ ತೆರವುಗೊಳಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಚರಂಡಿ ಹಾಗೂ ಡ್ರೈನೇಜ್ ಸ್ವಚ್ಛ ಮಾಡಬೇಕು ಮತ್ತು ಡೆಂಘೀ ನಿರ್ಮೂಲನೆಗೆ ಸಹಕಾರಿಯಾಗುವ ಕೆಲಸ ಮಾಡಬೇಕೆಂದು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದರು. ರಸ್ತೆ ಬದಿಯಲ್ಲಿನ ಅಪಾಯದ ಸ್ಥಿಯಲ್ಲಿರುವ ಲೈನ್ ಕಂಬಗಳನ್ನು ತೆರವು ಗೊಳಿಸಿ ಸಾರ್ವಜನಿಕರ ಸಂರಕ್ಷಣೆ ಮಾಡಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.ಸಾರ್ವಜನಿಕರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಹಾಗೂ ಸಹಾಯವಾಣಿ 08182- 279312 ಕರೆಮಾಡಿ ಮಾಹಿತಿ ನೀಡಬಹುದು ತಿಳಿಸಿದರು. ಸಭೆಯಲ್ಲಿ ತಾಲೂಕಿನ ಸಿಇಒ ಸಿ.ಅವಿನಾಶ್ , ಪೊಲೀಸ್ ಉಪಾಧೀಕ್ಷಕರು, ತಾಲೂಕು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಡೆಂಘೀ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಕಳೆದ ಬಾರಿ ಈ ಸಮಯಕ್ಕೆ 8 ಡೆಂಘೀ ಪ್ರಕರಣಗಳಿದ್ದು, ಈ ಬಾರಿ 55ಕ್ಕೆ ಏರಿಕೆಯಾಗಿದೆ. ಡೆಂಘೀ ರೋಗಗಳು ಬಾರದಂತೆ ತಡೆಯಲು ಶೇಖರಿಸಿದ ನೀರಿನ ಸಂಗ್ರಹಕಗಳ ವಾರಕ್ಕೆ 2 ಬಾರಿ ಸ್ವಚ್ಛಗೊಳಿಸಿ ನೀರು ಶೇಖರಿಸುವುದು, ತೊಟ್ಟಿ ಡ್ರಮ್ಗಳ ವಾರಕ್ಕೆ 2 ಬಾರಿ ಸ್ವಚ್ಚಗೊಳಿಸುವುದರಿಂದ ಸೊಳ್ಳೆ ಉತ್ಪತಿ ತಡೆಯಬಹುದು.
ಜಿ.ಬಿ.ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ