ಸಾರಾಂಶ
ಸಿ ಮತ್ತು ಡಿ ಭೂಮಿಯಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ತುಂಡರಿಸಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ ಮರ ಮತ್ತು ಕಟ್ಟಿಂಗ್ ಯಂತ್ರವನ್ನು ತಾಲೂಕು ರೈತ ಸಂಘ ಮತ್ತು ತಾಲೂಕು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಮರಳಿ ರೈತರಿಗೆ ಕೊಡಿಸಿದ ವಿದ್ಯಮಾನ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಿ ಮತ್ತು ಡಿ ಭೂಮಿಯಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ತುಂಡರಿಸಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ ಮರ ಮತ್ತು ಕಟ್ಟಿಂಗ್ ಯಂತ್ರವನ್ನು ತಾಲೂಕು ರೈತ ಸಂಘ ಮತ್ತು ತಾಲೂಕು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಮರಳಿ ರೈತರಿಗೆ ಕೊಡಿಸಿದ ವಿದ್ಯಮಾನ ಗುರುವಾರ ನಡೆದಿದೆ.ಇಲ್ಲಿಗೆ ಸಮೀಪದ ಮಸಗೋಡು ಗ್ರಾಮದ ಹೇಮಂತ್ ಕಾಫಿ ತೋಟದಲ್ಲಿ ಸಿಲ್ವರ್ ಮರಗಳನ್ನು ಬೆಳೆದಿದ್ದು, ಅವುಗಳ ಮಾರಾಟಕ್ಕೆ ತುಂಡರಿಸಲಾಗಿತ್ತು. ಈ ಸಂದರ್ಭ ಅರಣ್ಯ ಇಲಾಖೆಯ ಫಾರೆಸ್ಟರ್ ಸ್ಥಳಕ್ಕೆ ಬಂದು ಮೇಲಧಿಕಾರಿಗಳು ತಿಳಿಸಿದರೂ, ಮತ್ತೊಮ್ಮೆ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ, ಕಡಿದ ಮರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದರೊಂದಿಗೆ, ಮರವನ್ನು ಕತ್ತರಿಸಲು ಬಳಸಿದ್ದ ಕಟ್ಟಿಂಗ್ ಯಂತ್ರ ವಶಕ್ಕೆ ಪಡೆದಿದ್ದರು. ವಿಷಯ ತಿಳಿದ ರೈತ ಸಂಘ ಮತ್ತು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ತಡೆದರು.
ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಜಮೀನಿನಲ್ಲಿ ರೈತರು ಗಿಡಗಳನ್ನು ನೆಟ್ಟು ಬೆಳೆಸಿರುವ ಮರ ಮಾರಾಟ ಮಾಡುತ್ತಿದ್ದಾರೆ. ಅದನ್ನು ತಡೆಯಲು ಅರಣ್ಯ ಇಲಾಖೆಗೆ ಹಕ್ಕಿಲ್ಲ ಎಂದು ತಿಳಿಸಿದರು.ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್, ಈಗಾಗಲೇ ರೈತರ ನಿಯೋಗ ಬೆಂಗಳೂರಿಗೆ ತೆರಳಿ ಅರಣ್ಯ ಸಚಿವರೊಂದಿಗೆ ಮಾತನಾಡಿ, ಸದ್ಯಕ್ಕೆ ಅರಣ್ಯ ಇಲಾಖೆಯವರಯ ರೈತರ ಜಮೀನಿಗೆ ಪ್ರವೇಶಿಸದಂತೆ ಆದೇಶ ನೀಡಿದ್ದಾರೆ. ಆದರೆ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವುದು ತಪ್ಪು ಎಂದು ಹೇಳಿದರು.
ಹಿರಿಯ ವಕೀಲ ದೀಪಕ್ ಮಾತನಾಡಿ, ಈಗಾಗಲೇ ಅರಣ್ಯ ಸಚಿವರು ಒತ್ತುವರಿ ಕೃಷಿ ಭೂಮಿ ಜಂಟಿ ಸರ್ವೆ ಮಾಡಿಸಲು ತೀರ್ಮಾನಿಸಿದ್ದಾರೆ. ಜಂಟಿ ಸರ್ವೆ ಮಾಡಿಸಿ ಗಡಿ ಗುರುತಿಸುವ ತನಕ ಅರಣ್ಯಾಧಿಕಾರಿಗಳು ರೈತರಿಗೆ ತೊಂದರೆ ಕೊಡುವುದು ಬೇಡ ಎಂದು ತಿಳಿಸಿದರು.