ದೇವರಾಜು ಅರಸು ಭವನದಲ್ಲಿ ದೇವರಾಜ ಅರಸು ಅವರ 111 ನೇ ಜನ್ಮ ದಿನಾಚರಣೆ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹಲವು ಕ್ರಾಂತಿಕಾರಕ ನಿರ್ಧಾರದಿಂದ ಹಿಂದುಳಿದ ವರ್ಗದವರಿಗೆ ಇಂದು ಸಮಾಜದಲ್ಲಿ ಸ್ಥಾನ ಮಾನ ಸಿಕ್ಕುತ್ತಿದೆ ಎಂದು ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಅಭಿಪ್ರಾಯಪಟ್ಟರು.

ಗುರುವಾರ ಡಿ.ದೇವರಾಜ ಅರಸು ಭವನದಲ್ಲಿ ನಡೆದ ದೇವರಾಜ ಅರಸು ಅವರ 111 ನೇ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ದೇವರಾಜು ಅರಸು ಜಾರಿಗೆ ತಂದ ಹಾವನೂರು ವರದಿಗೂ ಮುನ್ನ ಹಿಂದುಳಿದ ಜಾತಿಗಳು ಇದೆ ಎಂಬುದೇ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ. ಹಿಂದುಳಿದ ವರ್ಗಗಳಿಗೆ ಶಾಶ್ವತವಾಗಿ ಮೀಸಲಾತಿ ನೀಡಬಾರದು ಎಂಬುದು ಕೆಲವರು ವಾದ ಮಾಡುತ್ತಿದ್ದಾರೆ. ಆದರೆ, ಹಿಂದಳಿದವರು, ಕೆಳ ಜಾತಿಯವರನ್ನು ದಮನ ಮಾಡುವ ಸ್ಥಿತಿ ಇರುವವರೆಗೂ ಮೀಸಲಾತಿ ಅಗತ್ಯ ಎಂದರು.

ಅತಿಥಿಯಾಗಿದ್ದ ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಮಾತನಾಡಿ ದೇವರಾಜ ಅರಸು ಕರ್ನಾಟಕ ರಾಜ್ಯದಲ್ಲಿ ಉಳುವುವನೇ ಭೂ ಒಡೆಯ ಎಂಬ ಕಾನೂನು ತಂದು ಲಕ್ಷಾಂತರ ಗೇಣಿದಾರರನ್ನು ಮಾಲೀಕರನ್ನಾಗಿ ಮಾಡಿದ್ದರು. ಮೈಸೂರು ಜಿಲ್ಲೆಯವರಾದ ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ರಾಜ್ಯಕ್ಕೆ ಹೊಸ ಭಾಷ್ಯ ಬರೆದಿದ್ದರು.


ಹಿಂದುಳಿದ ಆಯೋಗ ರಚಿಸಿ ಹಿಂದಳಿದವರಿಗೂ ಅಧಿಕಾರ ಸಿಕ್ಕುವಂತೆ ಮಾಡಿದ್ದರು ಎಂದರು.

ದೇವರಾಜ ಅರಸು ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ತಾಲೂಕಿನ ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಸಭೆ ಅಧ್ಯಕ್ಷತೆ ತಹಸೀಲ್ದಾರ್ ಡಾ.ನೂರಲ್ ಹುದಾ ವಹಿಸಿದ್ದರು. ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಪಿಸಿಎಆರ್.ಡಿ. ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ,ತಾಪಂ ಯೋಜನಾಧಿಕಾರಿ ಯಾದವರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಇಸ್ಮಾ ಯಿಲ್, ಹೂವಮ್ಮ, ನಿತ್ಯಾನಂದ, ನಾಗರಾಜ, ಬೇಸಿಲ್,ದೇವರಾಜ, ತಾಪಂ ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ತಾಲೂಕು ಹಿಂದಳಿದ ವರ್ಗಗಳ ಕಲ್ಯಾಣಾಧಿಕಾರಿ ಧರ್ಮರಾಜ್, ಶೃಂಗೇರಿ ಕ್ಷೇತ್ರ ವಾಲ್ಮೀಕಿ ಸಂಘದ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್, ಧರ್ಮರಾಜ್ , ಎಂ.ಸಿ.ಗುರುಶಾಂತಪ್ಪ ಇದ್ದರು.