ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ: ಡಾ.ಯಮುನಾ

| Published : Jun 11 2025, 11:14 AM IST

ಸಾರಾಂಶ

ವಿಜ್ಞಾನಿಗಳ ನಡೆ ರೈತರ ಕಡೆಗೆ ಎಂಬ ಶೀರ್ಷಿಕೆಯಡಿ ಕೇಂದ್ರ ಸರ್ಕಾರವು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಯಮುನಾ ತಿಳಿಸಿದರು.

ರೈತರಿಗಾಗಿ ಕಾರ್ಯಕ್ರಮ । ‘ವಿಜ್ಞಾನಿಗಳ ನಡೆ-ರೈತರ ಕಡೆಗೆ’ ಘೋಷವಾಕ್ಯ । ಕಡಹಿನಬೈಲಿನಲ್ಲಿ ಸಮಾರಂಭ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ವಿಜ್ಞಾನಿಗಳ ನಡೆ ರೈತರ ಕಡೆಗೆ ಎಂಬ ಶೀರ್ಷಿಕೆಯಡಿ ಕೇಂದ್ರ ಸರ್ಕಾರವು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಯಮುನಾ ತಿಳಿಸಿದರು.

ನಗರದ ಶೆಟ್ಟಿಕೊಪ್ಪದ ಕಡಹಿನಬೈಲು ಗ್ರಾಮ ಪಂಚಾಯಿತಿಯ ದ್ವಾಕ್ರ ಕಟ್ಟಡದಲ್ಲಿ ಸೋಮವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅಭಿಯಾನದ ಮುಖ್ಯ ಉದ್ದೇಶವೆಂದರೆ ಮುಂಗಾರಿನಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಸಂಬಂಧಪಟ್ಟಂತೆ ಇರುವ ಉಪ ತಂತ್ರಜ್ಞಾನ, ಹೊಸ ತಂತ್ರಜ್ಞಾನದ ತಳಿಗಳು ಯಾವುದು, ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಂಡಿದ್ದಾರೆಯೇ ಅಥವಾ ಅಳವಡಿಸಿಕೊಳ್ಳಲು ಏನು ಸಮಸ್ಯೆಗಳಿವೆ ಎಂಬುದನ್ನು ಅವಲೋಕನ ಮಾಡುತ್ತೇವೆ. ಮಲೆನಾಡು ಪ್ರದೇಶದಲ್ಲಿ ಬೆಳೆ ಬೆಳೆಯುವಲ್ಲಿ ರೈತರು ಏನು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ನಡೆಸುತ್ತೇವೆ ಎಂದರು.

ರೈತರು ತಮ್ಮ ಸಮಸ್ಯೆಗಳಿಗೆ ನಮ್ಮೊಂದಿಗೆ ಮುಕ್ತವಾಗಿ ಚರ್ಚೆ ನಡೆಸಬಹುದು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆಗೆ ಸಂಬಂಧ ಪಟ್ಟಂತೆ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ರೈತರು ಮಾಹಿತಿ ಪಡೆಯಬಹುದು. ಪ್ರತಿ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಮಣ್ಣಿಗೆ ಬೇಕಾಗುವ ಪೋಷಕಾಂಶಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಆಡುಗೋಡಿಯ ಅನಿಮಲ್ ನ್ಯೂಟ್ರಿಷಿಯನ್ ಅಂಡ್ ಪಿಜಿಯಾಲಜಿ ವಿಜ್ಞಾನಿ ಡಾ.ಚಂದ್ರಪ್ಪ ಮಾತನಾಡಿ. ರೈತರಿಗೆ ಪಶುಪಾಲನೆ ಕೂಡಾ ಒಂದು ಪ್ರಮುಖ ಆದಾಯ ತರುವ ಉಪ ಕೃಷಿ ಚಟುವಟಿಕೆಯಾಗಿದೆ. ಈಗ ಪಶುಪಾಲನೆ ಉದ್ಯಮಿಯಾಗಿ ಬೆಳೆಯುತ್ತಿದೆ.ರೈತರು ಹಾಲಿನ ಇಳುವರಿಯ ಕಡೆ ಗಮನ ನೀಡಬೇಕು. ಹಾಲಿನ ಇಳುವರಿ ಹೆಚ್ಚಾಗಲು ಪಶುಗಳಿಗೆ ಉತ್ತಮ ಆಹಾರ ನೀಡಬೇಕು ಎಂದರು.

ನರಸಿಂಹರಾಜಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚು ಬೆಳೆ ಬರಲಿ ಎಂಬ ಉದ್ದೇಶದಿಂದ ತಮ್ಮ ಅಡಿಕೆ ತೋಟಗಳಿಗೆ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ,ಟಾನಿಕ್ ಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ 3 ರಿಂದ 4 ವರ್ಷ ಅಧಿಕ ಫಸಲು ಬರುತ್ತದೆ. ಆದ್ದರಿಂದ ಅಡಿಕೆ ಬೆಳೆಗಾರರು ಕೊಟ್ಟಿಗೆ ಗೊಬ್ಬರ ಹೆಚ್ಚಾಗಿ ಬಳಸಬೇಕು. ಮಿಶ್ರ ಬೆಳೆಗಳಾಗಿ ಏಲಕ್ಕಿ, ಲವಂಗ, ದಾಲ್ಚಿನ್ನಿ, ಕಾಳು ಮೆಣಸು ಬೆಳೆಗಳನ್ನು ಬೆಳೆಯಿರಿ ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಮಾಹಿತಿ ನೀಡಿ, ರೈತರು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಬಹುದು.ಭತ್ತದ ಬೆಳೆಗೆ ವಿಮೆ ಮಾಡಲು ಅವಕಾಶವಿದೆ. ಕೃಷಿ ಇಲಾಖೆಯಿಂದ ರೈತರಿಗೆ ಬೇಕಾಗುವ ಸ್ಪಿಂಕ್ಲರ್, ನೀರಾವರಿ ಉಪಕರಣ, ಟಾರ್ಪಲ್, ಪವರ್ ಟಿಲ್ಲರ್‌ಗಳು ಸಬ್ಸಿಡಿ ದರದಲ್ಲಿ ಸಿಗಲಿದೆ ಎಂದರು.

ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್,ಸದಸ್ಯರಾದ ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ಗ್ರಾಮ ಪಂಚಾಯಿತಿ ಪಿಡಿಒ ವಿಂದ್ಯಾ ಇದ್ದರು.