ಕೇಂಪೇಗೌಡರು ಬೆಂಗಳೂರು ನಗರದಲ್ಲಿ ವಾಣಿಜ್ಯದ ಉದ್ದೇಶಕೋಸ್ಕರ ಬೃಹತ್ ಪೇಟೆಗಳನ್ನು ನಿರ್ಮಿಸಿರುತ್ತಾರೆ. ಅವರು ಕೆರೆಕಟ್ಟೆಗಳನ್ನು ಕಟ್ಟಿಸಿರುತ್ತಾರೆ. ಎಲ್ಲ ಜನಾಂಗದ ಅಭಿವೃದ್ಧಿಯನ್ನು ಮಾಡಿ ಮಾದರಿ ವ್ಯಕ್ತಿಯಾಗಿ ಇಂದಿಗೂ ಸಹ ಅವರ ಕಾರ್ಯ ಮೆಚ್ಚುವಂತದ್ದಾಗಿರುತ್ತದೆ ಎಂದು ನ್ಯಾಯಾಧೀಶ ಹಿದಾಯತ್ ಉಲ್ಲ ಶರೀಫ್ ಹೇಳಿದರು. ಹಾಸನದಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು.

ಹಾಸನ ಜಿಲ್ಲಾ ವಕೀಲರ ಸಂಘದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ ಹಾಸನ

ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ನಂತರ ಬೆಂಗಳೂರು ನಗರದಲ್ಲಿ ವಾಣಿಜ್ಯದ ಉದ್ದೇಶಕೋಸ್ಕರ ಬೃಹತ್ ಪೇಟೆಗಳನ್ನ ನಿರ್ಮಿಸಿರುತ್ತಾರೆ. ಅವರು ಕೆರೆಕಟ್ಟೆಗಳನ್ನು ಕಟ್ಟಿಸಿರುತ್ತಾರೆ. ಎಲ್ಲ ಜನಾಂಗದ ಅಭಿವೃದ್ಧಿಯನ್ನು ಮಾಡಿ ಮಾದರಿ ವ್ಯಕ್ತಿಯಾಗಿ ಇಂದಿಗೂ ಸಹ ಅವರ ಕಾರ್ಯ ಮೆಚ್ಚುವಂತದ್ದಾಗಿರುತ್ತದೆ ಎಂದು ನ್ಯಾಯಾಧೀಶ ಹಿದಾಯತ್ ಉಲ್ಲ ಶರೀಫ್ ಹೇಳಿದರು.

ಜಿಲ್ಲಾ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯಲ್ಲಿ ಮಾತನಾಡಿದರು.

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಮಹಾಸ್ವಾಮಿ ಮಾತನಾಡಿ, ಹಾಸನ ಜಿಲ್ಲಾ ವಕೀಲರ ಸಂಘದಲ್ಲಿ ಮಾದರಿಯಾಗಿ ಕೆಂಪೇಗೌಡ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ವಕೀಲರು ವಿದ್ಯಾರ್ಥಿಗಳಂತೆ ವೇದಿಕೆ ಮುಂಭಾಗ ಕೂತು ಕೆಂಪೇಗೌಡರ ಆದರ್ಶಗಳನ್ನು ನೆನೆಯುತ್ತಿರುವುದು ತುಂಬಾ ಖುಷಿಯ ವಿಚಾರ. ವಕೀಲರು ಮತ್ತು ನ್ಯಾಯಾಧೀಶರು ಒಟ್ಟಿಗೆ ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶೈಲ ಮಾತನಾಡಿ, ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂಬುದಾಗಿ ಮಾಡಲು ಕೆಂಪೇಗೌಡರು ಅಂದಿನ ಕಾಲದಲ್ಲಿ ಶ್ರಮಿಸಿರುತ್ತಾರೆ. ಅವರ ಉದಾತ್ತ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಮಾತನಾಡಿ, ಒಕ್ಕಲಿಗರು ಈ ಭೂಮಿ ತಾಯಿಯ ಚೊಚ್ಚಲ ಮಕ್ಕಳು ಬೇಂದ್ರೆ ಹೇಳಿದ್ದಾರೆ. ಕುವೆಂಪುರವರು ಒಕ್ಕಲಿಗರನ್ನು ಈ ಭೂಮಿಯ ಯೋಗಿಗಳು ಎಂದು ಕರೆದಿದ್ದಾರೆ. ಈಗ ರೈತರನ್ನು ಮರೆತು ಜೀವನ ಮಾಡುತ್ತಿದ್ದೇವೆ. ಎಂದೆಂದಿಗೂ ರೈತರನ್ನು ನೆನೆಯಬೇಕು ಎಂದು ಕರೆ ನೀಡಿದರು.

ಕೆಂಪೇಗೌಡರು ವಿಜಯನಗರದ ಸಾಮಂತರಾಗಿ ಬೆಂಗಳೂರಿನ ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ್ದಾರೆ. ನಾಲ್ಕು ದಿಕ್ಕುಗಳಲ್ಲಿ ಕೋಟೆಗಳನ್ನು ಕಟ್ಟಿಸಿರುತ್ತಾರೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಡಿ.ಟಿ.ಪ್ರಸನ್ನ ಮಾತನಾಡಿ, ‘ಕೆಂಪೇಗೌಡ ಜಯಂತಿಯನ್ನು ನಮ್ಮ ಸಂಘದ ಸದಸ್ಯರು ತುಂಬಾ ಒಮ್ಮತದಿಂದ ಆಚರಿಸಿದ್ದೇವೆ. ಕೆಂಪೇಗೌಡರ ಜೀವನ ಚರಿತ್ರೆ ನಮಗೆ ಆದರ್ಶವಾಗಿದೆ. ಅವರ ಹೋರಾಟ ಬದುಕು ಇಂದಿನ ಯುವಕರಿಗೆ ದಾರಿದೀಪವಾಗಿದೆ’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿ, ‘ಸಮಾಜ ಕಟ್ಟುವ ಕೆಲಸವನ್ನು ಕೆಂಪೇಗೌಡರು ನಮಗೆ ಕೊಟ್ಟಿರುತ್ತಾರೆ. ಪ್ರಾಮಾಣಿಕವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಮೊದಲಿಗೆ ಶಂಬುನಾಥ ಮಹಾಸ್ವಾಮಿಗಳನ್ನು ಪೂರ್ಣ ಕಂಬ ಸ್ವಾಗತದೊಂದಿಗೆ ಬರಮಾಡಿಕೊಂಡು ಸಂಘದ ಗಣಪತಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಂತರ ವೇದಿಕೆಯಲ್ಲಿ ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮೂರು ಜನ ಪ್ರಗತಿಪರ ಯುವ ರೈತರಿಗೆ ಸನ್ಮಾನ ಮಾಡಿದರು.

ಸಂಘದ ಉಪಾಧ್ಯಕ್ಷರಾದ ಯೋಗೀಶ್, ಕಾರ್ಯದರ್ಶಿ ಬಿ.ಎಂ.ಸಂತೋಷ್, ಖಜಾಂಚಿ ಎಚ್.ಎನ್. ಪ್ರತಾಪ್, ಜಂಟಿ ಕಾರ್ಯದರ್ಶಿ ರೂಪ ಹಾಗೂ ವಕೀಲರು ಹಾಜರಿದ್ದರು.