ಮಾನವ ಸಂಪನ್ಮೂಲ ಯಾವುದೇ ಭಾಗ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಾನವ ಸಂಪನ್ಮೂಲ ಯಾವುದೇ ಭಾಗ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ತಿಳಿಸಿದರು.ಪಟ್ಟಣದ ಪ.ಪಂಚಾಯಿತಿ ಸಭಾಂಗಣದಲ್ಲಿ ಸ್ನೇಹಜೀವನ ಫೌಂಡೇಶನ್ ಆಶಯದಲ್ಲಿ ವಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ವಿಕಲಚೇತನರ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ವಿಕಲಚೇತನರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಅವರನ್ನು ಆದರ್ಶವಾಗಿ ಇಟ್ಟುಕೊಂಡು ಇತರೆ ವಿಕಲಚೇತನರು ಮುಖ್ಯ ವಾಹಿನಿಗೆ ಬರಲು ಮುಂದಾಗಬೇಕು. ಅಪಘಾತ ಸಂಭವಿಸುವುದರಿಂದ ಅಂಗವಿಕಲತೆ ಕಂಡುಬರುತ್ತದೆ. ದ್ವಿಚಕ್ರ ವಾಹನದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವುದರಿಂದ ಪೋಷಕರು ವೇಗವಾಗಿ ವಾಹನ ಚಲಾಯಿಸುವುದನ್ನು ನಿಲ್ಲಿಸಲು ತಮ್ಮ ಮಕ್ಕಳಿಗೆ ತಿಳಿಸಬೇಕು. ವಿಕಲಚೇತನರು ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ, ವಿಕಲಚೇತನರ ದಿನಾಚರಣೆಯನ್ನು ಮಾಡುವ ಮುಖ್ಯ ಉದ್ದೇಶವೇನೆಂದರೆ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು, ಅವರ ಘನತೆಯನ್ನು ಎತ್ತಿ ಹಿಡಿಯುವುದು ಮತ್ತು ಅವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಇಂದು ಈ ವಿಶೇಷಚೇತನರ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.ಸಂಪನ್ಮೂಲ ವ್ಯಕ್ತಿ ಡಿ.ಲೋಕೇಶ ಮಾತನಾಡಿ, ವಿಕಲಚೇತನರಿಗೆ ಇರುವ ಪ್ರಮುಖ ಸವಾಲುಗಳಾದ ಪ್ರವೇಶ ಅರ್ಹತೆ ಕೊರತೆ, ಸಾಮಾಜಿಕ ತಾರತಮ್ಯ ಮತ್ತು ಕಳಂಕ ಕೊರತೆ, ಶೈಕ್ಷಣಿಕ ಸವಾಲುಗಳು, ಆರ್ಥಿಕ ಮತ್ತು ಉದ್ಯೋಗ ಸವಾಲುಗಳು, ಆರೋಗ್ಯದ ಸವಾಲು ಇವುಗಳನ್ನು ಸಮಾಜ ಮತ್ತು ಸರ್ಕಾರ ಒಟ್ಟಾಗಿ ಸೇರಿಕೊಂಡಾಗ ಮಾತ್ರ ಬಗೆಹರಿಸಬಹುದು. ವಿಕಲಚೇತನ ಉಂಟಾಗುವುದು ಹುಟ್ಟುವ ಮುಂಚೆ, ಹುಟ್ಟುವಾಗ, ಹುಟ್ಟಿದ ನಂತರ ಈ ಸಮಯದಲ್ಲಿ ಜಾಗೃತರಾಗಿದ್ದರೆ ಅಂಗವಿಕಲತೆಯ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾಪಂ ಎಂಆರ್ ಡಬ್ಲ್ಯೂ ಶಿವಗಂಗಮ್ಮ ಮಾತನಾಡಿ, ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ವಕೀಲರಾದ ರಂಗನಾಥ್ ಮಾತನಾಡಿ, ಪ್ರತಿಯೊಬ್ಬ ವಿಕಲಚೇತನರು ಆತ್ಮವಿಶ್ವಾಸ ಕಳೆದುಕೊಳ್ಳದೆ ವಿಶ್ವಾಸದಿಂದ, ಧೈರ್ಯದಿಂದ ಮುಂದೆ ಬಂದರೆ ತಾವು ಸಹ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಹಾಗೂ ತಮಗಿರುವ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ಕ್ರೀಡಾಪಟುಗಳಾದ ಗಂಗರಾಜು, ಯತೀಶ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸಮುದಾಯ ಸಂಘಟಕರಾದ ಲೋಕನಾಥ್, ದಿವ್ಯಾಂಗ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಕುಮಾರ್, ಅಧ್ಯಕ್ಷ ಜಯರಾಮಯ್ಯ, ಬಿ.ಟಿ
ಗಿರೀಶ್ ಕುಮಾರ್, ಆರೋಗ್ಯ ಅಧಿಕಾರಿ ರಮೇಶ್, ಯು ಆರ್ ಡಬ್ಲ್ಯೂ ಮೋಹನ್, ವಿ ಆರ್ ಡಬ್ಲ್ಯೂ, ವಿಕಲಚೇತನರು, ಹಾಗೂ ಪೋಷಕರು ಇತರರು ಉಪಸ್ಥಿತರಿದ್ದರು.