ಗೋವಾ–ದೆಹಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಪ್ರಭಾರಿ ಕಾರ್ಯದರ್ಶಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಯುವ ಅಮೆರಿಕನ್ ಯುವತಿಯೊಬ್ಬರ ಪ್ರಾಣವನ್ನು ಉಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋವಾ–ದೆಹಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಪ್ರಭಾರಿ ಕಾರ್ಯದರ್ಶಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಯುವ ಅಮೆರಿಕನ್ ಯುವತಿಯೊಬ್ಬರ ಪ್ರಾಣವನ್ನು ಉಳಿಸಿದ್ದಾರೆ.

ಗೋವಾದಿಂದ ದೆಹಲಿಗೆ ಹೊರಟ ತಕ್ಷಣವೇ ಯುವತಿ ಅಸ್ವಸ್ಥರಾಗಿದ್ದು, ನಡುಗತೊಡಗಿದರು. ಅವರ ನಾಡಿಮಿಡಿತ ಕೂಡ ನಿಲ್ಲುವ ಹಂತಕ್ಕೆ ತಲುಪಿತ್ತು. ತಕ್ಷಣ ಸ್ಪಂದಿಸಿದ ಡಾ.ಅಂಜಲಿ ಅವರು, ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಶನ್ (ಸಿಪಿಆರ್) ನಡೆಸಿ ಯುವತಿಗೆ ಜೀವ ತುಂಬಿದರು. ಸುಮಾರು ಅರ್ಧ ಗಂಟೆಯ ನಂತರ ಯುವತಿ ಮತ್ತೊಮ್ಮೆ ಕುಸಿದುಬಿದ್ದಾಗ ಮತ್ತೆ ನಾಡಿ ನಿಲ್ಲುವ ಪರಿಸ್ಥಿತಿ ಎದುರಾಯಿತು. ಡಾ.ಅಂಜಲಿ ಅವರ ನಿರಂತರ ಪ್ರಯತ್ನಗಳಿಂದ ಆಕೆಯ ನಾಡಿ ಪುನಃ ಚೇತರಿಸಿಕೊಂಡಿತು.

ಡಾ.ಅಂಜಲಿ ನಿಂಬಾಳ್ಕರ್ ಅವರು ವಿಮಾನದ ಉಳಿದ ಪ್ರಯಾಣಾವಧಿಯಲ್ಲಿ ರೋಗಿಯ ಪಕ್ಕದಲ್ಲೇ ನಿಂತು, ಆಕೆಯ ಸ್ಥಿತಿಯನ್ನು ನಿಕಟವಾಗಿ ಗಮನಿಸಿದರು. ವಿಮಾನ ಇಳಿಯುವಾಗ ರನ್‌ವೇಯಲ್ಲಿ ಆ್ಯಂಬುಲೆನ್ಸ್‌ ಸಿದ್ಧವಾಗಿರುವಂತೆ ವಿಮಾನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿದರು. ದೆಹಲಿ ಏರ್‌ಪೋರ್ಟ್‌ನಲ್ಲಿ ವಿಮಾನ ಇಳಿದ ತಕ್ಷಣವೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ವ್ಯವಸ್ಥೆ ಮಾಡಿದರು.

30 ಸಾವಿರ ಅಡಿ ಎತ್ತರದಲ್ಲಿ ಅಮೂಲ್ಯ ಜೀವವನ್ನು ಉಳಿಸಿದ ಡಾ.ಅಂಜಲಿ ನಿಂಬಾಳ್ಕರ್ ಅವರ ಸಮಯೋಚಿತ ಕ್ರಮ ಹಾಗೂ ಮಾನವೀಯ ಸೇವೆಯನ್ನು ವಿಮಾನದ ಪೈಲಟ್‌, ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಮನಃಪೂರ್ವಕವಾಗಿ ಪ್ರಶಂಸಿಸಿದ್ದಾರೆ.