ಕೆಂಪೇಗೌಡರ ಸ್ಮಾರಕಕ್ಕೆ ಸರ್ಕಾರದ ಜೊತೆ ಚರ್ಚೆ

| Published : Jun 28 2024, 12:50 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ದೊಡ್ಡಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎ.ಆರ್.ಕೃಷ್ಣಮೂರ್ತಿ, ಹೊಂಗನೂರು ಚಂದ್ರು, ರಾಚೇಗೌಡ, ಬಸವೇಗೌಡ, ಉಪವಿಭಾಗಾಧಿಕಾರಿ ಮಹೇಶ್ ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೆಂಪೇಗೌಡರ ಸಮಾಧಿ ಸ್ಥಳವನ್ನು ಸ್ಮಾರಕ ಸ್ಥಳವನ್ನಾಗಿಸಬೇಕು. ಅವರ ಬೃಹತ್ ಅಧ್ಯಯನ ಗ್ರಂಥದಲ್ಲಿ ಅವರ ಜೀವನ ಚರಿತ್ರೆ ರೂಪಿಸಬೇಕು ಎಂಬ ವಿಚಾರವನ್ನು ನಾನು ಸರ್ಕಾರದ ಜೊತೆ ಚರ್ಚಿಸುವೆ ಎಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಇಡೀ ವಿಶ್ವ ನಮ್ಮ ಬೆಂಗಳೂರು ನಗರವನ್ನು ನೋಡುವಂತಾಗಿದೆ. ಸಿಲಿಕಾನ್‌ ಸಿಟಿ, ಉದ್ಯಾನ ನಗರಿ, ಐಟಿ ಪಾರ್ಕ್ ಎಂಬ ಹೆಸರುಗಳಿಂದ ಉಲ್ಲೇಖಿಸಲಾಗುತ್ತಿದ್ದು ಇದಕ್ಕೆಲ್ಲ ಮೂಲಪುರುಷರು ಕೆಂಪೇಗೌಡರು. ಅವರೇ ಬೆಂಗಳೂರು ನಿರ್ಮಾತೃಗಳು, ಹಾಗಾಗಿಯೇ ಅವರನ್ನು ನಾಡಪ್ರಭು ಕೆಂಪೇಗೌಡ ಎಂಬಿತ್ಯಾದಿ ಹೆಸರುಗಳಿಂದ ಉಲ್ಲೇಖಿಸುತ್ತಿದೇವೆ ಎಂದು ವ್ಯಾಖ್ಯಾನಿಸಿದರು. ನಾಡಪ್ರಭು ಬೆಂಗಳೂರು ಅಭಿವೃದ್ಧಿಗಾಗಿ ದೂರದೃಷ್ಟಿ ಹೊಂದಿದ್ದರು. ಅವರ ದೂರದೃಷ್ಟಿ ಪರವಾಗಿಯೇ ಬೆಂಗಳೂರು ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ ಎಂದರು.

ಇಂದಿನ ಸಮಾರಂಭಗಳಲ್ಲಿ ಕೆಂಪೇಗೌಡರ ಆದರ್ಶವನ್ನು ನಾವೆಲ್ಲರೂ ರೂಡಿಸಿಕೊಳ್ಳುವ ಮೂಲಕ ಅವರ ಜಯಂತಿಗೆ ನೈಜ ಅರ್ಥ ತರುವ ಸಂಕಲ್ಪ ಮಾಡೋಣ ಎಂದರು. ಕ್ಷಮೆ ಕೋರಿ ಸೌಜನ್ಯ ಮೆರೆದ ಶಾಸಕ: ಶಾಸಕ ಎ.ಆರ್ ಕೃಷ್ಣಮೂರ್ತಿ ಅವರು 1 ಗಂಟೆಗೂ ಹೆಚ್ಚು ತಡವಾಗಿ ಆಗಮಿಸಿದ ಹಿನ್ನೆಲೆ ತಡವಾಗಿಯೇ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಹಾಗಾಗಿ ಶಾಸಕರ ಬರುವಿಕೆಗಾಗಿ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಕಾಯುವಂತಾಯಿತು. ಬಳಿಕ ತಡವಾಗಿ ಆಗಮಿಸಿದ ಶಾಸಕರು ನಾನು ಈ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದಕ್ಕೆ ಕ್ಷಮೆ ಇರಲಿ ಎಂದು ಸೌಜನ್ಯ ಮೆರೆದರು. ಅನ್ಯ ಕಾರ್ಯನಿಮಿತ್ತ 1 ಗಂಟೆ ಕಾಲ ತಡವಾಯಿತು. ದಯಮಾಡಿ ಮುಖಂಡರೆಲ್ಲರೂ ಕ್ಷಮಿಸಿ ಎಂದು ಮನವಿ ಮಾಡಿದರು.ಇದೇ ವೇಳೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರು ದೊಡ್ಡಲಿಂಗೇಗೌಡ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಪವಿಭಾಗಾದಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ಬಿಇಒ ಮಂಜುಳಾ, ತಾಪಂ ಇಒ ಶ್ರೀನಿವಾಸ್, ನಗರಸಭೆ ಪೌರಾಯುಕ್ತ ರಮೇಶ್, ಗ್ಯಾರಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ರಾಜೇಗೌಡ, ಕಾರ್ಯದರ್ಶಿ ಡಿ.ಬಸವೇಗೌಡ ಇನ್ನಿತರರಿದ್ದರು.