ರಾಣಿಬೆನ್ನೂರಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ

| Published : May 27 2025, 01:04 AM IST

ರಾಣಿಬೆನ್ನೂರಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಕಳಪೆ ಬೀಜಗಳನ್ನು ಖರೀದಿಸಿ ಮೋಸ ಹೋಗಬಾರದು. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ರೈತರಿಗೆ ವಂಚಿಸುವ ಪ್ರಕರಣಗಳು ಕೇಳಿ ಬರುತ್ತಿದ್ದು ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

ರಾಣಿಬೆನ್ನೂರು: ತಾಲೂಕಿನಾದ್ಯಂತ ಕಳಪೆ ಬಿತ್ತನೆ ಬೀಜದ ಮಾರಾಟ ನಡೆಯುತ್ತಿದೆ ಎಂದು ಕೆಲವು ದೂರುಗಳು ಬರುತ್ತಿದ್ದು, ರೈತರು ಅಂತಹ ನಕಲಿ, ಕಳಪೆ, ಲೂಸ್ ಬೀಜಗಳನ್ನು ಕೊಂಡುಕೊಳ್ಳದೆ ಸರ್ಕಾರದ ಅಧಿಕೃತ ಅಂಗಡಿಗಳಲ್ಲಿ ಬಿತ್ತನೆ ಬೀಜಗಳನ್ನು ರಸೀದಿಯೊಂದಿಗೆ ಪಡೆಯಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ಇಲ್ಲಿನ ಕಮಲಾ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ರೈತರು ಕಳಪೆ ಬೀಜಗಳನ್ನು ಖರೀದಿಸಿ ಮೋಸ ಹೋಗಬಾರದು. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ರೈತರಿಗೆ ವಂಚಿಸುವ ಪ್ರಕರಣಗಳು ಕೇಳಿ ಬರುತ್ತಿದ್ದು ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ವಾಡಿಕೆಗಿಂತ ಮಳೆ ಉತ್ತಮವಾಗಿದೆ. ಮುಂಗಾರು ಪೂರ್ವದಲ್ಲಿ ತಾಲೂಕಿನಾದ್ಯಂತ ಹದವಾದ ಮಳೆ ಬಿದ್ದಿದೆ. ರೈತರು ಗುಣಮಟ್ಟದ ಹಾಗೂ ಅಧಿಕೃತ ಬೀಜಗಳನ್ನು ಬಿತ್ತನೆಗಾಗಿ ಪಡೆಯಬೇಕು. ಈ ವರ್ಷ ಸದ್ಯ ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆ ಇಲ್ಲ ಎಂದರು. ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರ ವಿತರಣೆಗೆ ಕಳೆದ ವರ್ಷದಂತೆ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದೆ. ಸೂಪರ್ ಮಾರ್ಕೆಟ್ ಮಾದರಿಯಲ್ಲಿ ರೈತರು ಖರೀದಿಸುವ ಪಾಕೇಟ್ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ರೈತರಿಗೆ ಬಿಲ್ ಜನರೇಟ್ ಆಗುತ್ತದೆ. ಆದರೂ ಕೂಡ ರಶೀದಿ ನೀಡುವ ವ್ಯವಸ್ಥೆಯೂ ಸಹ ಇರುತ್ತದೆ.

ಬಿತ್ತನೆ ಬೀಜ ವಿತರಣೆ ಸಮಯದಲ್ಲಿ ಪ್ರತಿ ಪ್ಯಾಕೇಟ್ ಸ್ಕ್ಯಾನ್ ಮಾಡಿ ಸೀಡ್ ಎಂಐಎಸ್‌ನಲ್ಲಿ ಕ್ಯೂ ಆರ್ ಕೋಡ್ ಜತೆಗೆ ಇತರೆ ದಾಖಲಾತಿ ನಮೂದಿಸಿದ ನಂತರವೇ ಬೀಜ ವಿತರಣೆ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಬೇರೆ ರೈತರ ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ಕೃಷಿ ಪರಿಕರಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಖರೀದಿಸಿದಲ್ಲಿ ತಕ್ಷಣವೇ ರೈತರಿಗೆ ಮೊಬೈಲ್ ಸಂದೇಶ ಹೋಗುತ್ತದೆ. ಆದ್ದರಿಂದ ರೈತರು ತಾವೇ ಖುದ್ದು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಪರಿಕರಗಳನ್ನು ಖರೀದಿಸಬೇಕು ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಕೃಷಿ ಅಧಿಕಾರಿಗಳಾದ ಅರವಿಂದ ಎಂ., ವೀರೇಶ ಜೆ.ಎಂ. ಮತ್ತಿತರಿದ್ದರು.ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ

ಹಾವೇರಿ: ನಗರದ ಬಸ್ ನಿಲ್ದಾಣದಲ್ಲಿ ಹ್ಯಾಂಡ್‌ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್‌ನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿ ಮಂಜುನಾಥ ಮೇಲಿನಮನಿ ಎಂಬವರಿಗೆ ಸೇರಿದ ಸುಮಾರು ₹30 ಸಾವಿರ ಕಿಮ್ಮತ್ತಿನ ಬೈಕ್ ಇದಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.