ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ದಲಿತ ಯುವಕನ ಮೇಲೆ ನಡೆದಿರುವ ಹಲ್ಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪರಿಹಾರ ಹಣವನ್ನು ನೀಡಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಧಮ್ಮ ದಿವೀಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.ನಗರದ ಖಾಸಗಿ ಹೋಟೆಲ್ನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ಕಂಡು ಕಾಣದಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿಯವರು ದಲಿತ ಸಮುದಾಯದ ಮೇಲೆ ಹೊಂದಿರುವ ತಾತ್ಸಾರ ಹಾಗೂ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಕಳೆದ ಕೆಲವು ತಿಂಗಳುಗಳ ಹಿಂದೆ ನಗರದ ಮಳಗಾಳು ವಾರ್ಡ್ನಲ್ಲಿ ದಲಿತ ಯುವಕ ಅನೀಶ್ ಕುಮಾರ್ ಮೇಲೆ ನಡೆದ ಹಲ್ಲೆ ಯಲ್ಲಿ ತನ್ನ ಎಡಗೈ ಕಳೆದಕೊಂಡಿದ್ದು ರಾಜ್ಯ ಸರ್ಕಾರ ಆತನ ಕೈ ಜೋಡಣೆ ಹಾಗೂ ಚಿಕಿತ್ಸಾ ವೆಚ್ಚಕ್ಕಾಗಿ ಸುಮಾರು 13 ಲಕ್ಷ ರುಪಾಯಿಗಳನ್ನು ನೀಡಿದ್ದರೂ ಸಹ ಜಿಲ್ಲಾಧಿಕಾರಿಗಳು ನೊಂದ ಯುವಕನಿಗೆ ಅ ಪರಿಹಾರದ ಹಣವನ್ನು ಇದುವರೆಗೂ ನೀಡಿಲ್ಲ ಎಂದು ನೀಡದಿರುವುದು ಅವರು ದಲಿತರ ಮೇಲೆ ಇಟ್ಟಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.ಪರಿಹಾರದ ಹಣ ನೀಡದಿದ್ದರೂ ಸಹ ಜಿಲ್ಲಾಧಿಕಾರಿ ಯಶವಂತ್ ವಿ. ಗುರಿಕಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕೇವಲ ಪ್ರಚಾರಕ್ಕಾಗಿ ಪರಿಹಾರ ಹಣ ನೀಡಿರುವುದಾಗಿ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಕಾರ್ಯ ವೈಖರಿ:ಸಮಾಜ ಕಲ್ಯಾಣ ಇಲಾಖೆಯ ಕಾರ್ಯವೈಖರಿ ಹೇಗಿದೆ ಎಂದರೆ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯವಾಗಿರುವ ಪ್ಯಾನ್, ಚಪಾತಿ ತಯಾರಿಸುವ ಯಂತ್ರದ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಗಾಗಿ ಟೆಂಡರ್ ಅನ್ನು ಕರೆಯದೇ ಕಮಿಷನ್ ಆಸೆಗಾಗಿ ತಮಗೆ ಬೇಕಾದ ಒಂದು ಕಂಪನಿಗೆ ಅವಕಾಶ ಮಾಡಿಕೊಟ್ಟು ಅವರಿಂದ ಕಳಪೆ ಗುಣಮಟ್ಟದ ಉಪಕರಣಗಳನ್ನು ತರಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ದಲಿತ ಅಪ್ರಾಪ್ತ ಬಾಲಕಿ ಸಾವಿನ ವಿಚಾರದಲ್ಲಿ ಡಿಸಿಎಂ ಅವರಿಂದ ಪರಿಹಾರದ ಚೆಕ್ ವಿತರಣೆ ಮಾಡಿಸಿ ನಂತರ ಅದನ್ನು ಹಿಂದಕ್ಕೆ ಪಡೆದಿರುವುದನ್ನು ನೋಡಿದರೆ ಅವರ ದಲಿತ ವಿರೋಧಿ ನೀತಿ ಎದ್ದು ಕಾಣುತ್ತಿದ್ದು ದಲಿತ ಸಮುದಾಯದ ಜನರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ ಪ್ರಕರಣಗಳ ಬಗ್ಗೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡು ಸರ್ಕಾರಕ್ಕೆ ಶೀಘ್ರವಾಗಿ ಮಾಹಿತಿ ಕಳಿಸುವ ಜವಾಬ್ದಾರಿ ಜಿಲ್ಲಾಧಿಕಾರಿ ಗಳದಾಗಿದ್ದರೂ ಸಹ ಅವರು ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತೆಯಿಂದ ತಮಗೆ ಇಷ್ಟ ಬಂದ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ರಾಜ್ಯ ಸರ್ಕಾರ ಇದರ ಬಗ್ಗೆ ಗಮನಹರಿಸಿ ಇವರ ವಿರುದ್ಧ ಸೂಕ್ತ ತನಿಖೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.ಹಲ್ಲೆಯಿಂದ ಕೈಯನ್ನು ಕಳೆದುಕೊಂಡಿರುವ ಸಂತ್ರಸ್ತ ಅನೀಶ್ ಕುಮಾರ್, ಟ್ರಸ್ಟ್ ನ ಪದಾಧಿಕಾರಿ ಹರ್ಷ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 03:ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಮಲ್ಲಿಕಾರ್ಜುನ್ ಜಿಲ್ಲಾಧಿಕಾರಿಗಳ ದಲಿತ ವಿರೋಧಿ ನೀತಿ ವಿರುದ್ಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು.