ಮಹಾಲಿಂಗಪುರ ತಾಲೂಕು ಹೋರಾಟ ಸೋಮವಾರ ೧೩೮೧ನೇ ದಿನಕ್ಕೆ ಕಾಲಿಡುತ್ತಿರುವುದರ ಹಿನ್ನೆಲೆ ತಾಲೂಕು ಘೋಷಣೆಗೆ ಆಗ್ರಹಿಸಿ ಜ.೧೯ರಂದು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟಿಸುವ ತೀರ್ಮಾನ ಕೈಗೊಂಡಿದೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಾಲಿಂಗಪುರ ತಾಲೂಕು ಹೋರಾಟ ಸೋಮವಾರ ೧೩೮೧ನೇ ದಿನಕ್ಕೆ ಕಾಲಿಡುತ್ತಿರುವುದರ ಹಿನ್ನೆಲೆ ತಾಲೂಕು ಘೋಷಣೆಗೆ ಆಗ್ರಹಿಸಿ ಜ.೧೯ರಂದು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟಿಸುವ ತೀರ್ಮಾನ ಕೈಗೊಂಡಿದೆ. ಬಾದಾಮಿಯಲ್ಲಿ ಜ.೧೯ರಿಂದ ಜರುಗಲಿರುವ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗೆ ಕಾರಣವಾಗಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತದ ಪರವಾಗಿ ತಹಸೀಲ್ದಾರ್ ಗಿರೀಶ ಸ್ವಾದಿ ನೇತೃತ್ವದಲ್ಲಿ ಹೋರಾಟಗಾರರ ಮನವೊಲಿಕೆ ಪ್ರಯತ್ನ ವಿಫಲವಾಯಿತು. ಶುಕ್ರವಾರ ಸಂಜೆ ಸ್ಥಳೀಯ ಜಿಎಲ್ಬಿಸಿ ಸಭಾಭವನದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮತ್ತು ಪುರಸಭಾ ಮಾಜಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ನೇತೃತ್ವದಲ್ಲಿ ಜ.೧೯ರಂದು ಹಮ್ಮಿಕೊಂಡಿರುವ ಮಹಾಲಿಂಗಪುರ ಬಂದ್ ಸ್ಥಗಿತಗೊಳಿಸುವಂತೆ ಅಥವಾ ಮುಂದೂಡುವಂತೆ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು.ಮುಖಂಡ ಸಿದ್ದು ಕೊಣ್ಣೂರ ಅವರ ಭರವಸೆಯನ್ನು ಪುರಸ್ಕರಿಸದ ಹೋರಾಟಗಾರ ಮುಖಂಡರಾದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಪರಪ್ಪ ಬ್ಯಾಕೋಡ, ಸಂಗಪ್ಪ ಹಲ್ಲಿ , ಶಿವಾನಂದ ಟಿರ್ಕಿ, ನಿಂಗಪ್ಪ ಬಾಳಿಕಾಯಿ, ಅರ್ಜುನ ಹಲಗಿಗೌಡರ ಮಾತನಾಡಿ, ಜ.೧೯ರೊಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಟಿಪಿ ತಯಾರಿಸಿ ಅವಕಾಶ ಒದಗಿಸಿ ಕೊಟ್ಟಲ್ಲಿ ಅದೇ ದಿನ ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ, ಇಲ್ಲದಿದ್ದರೆ ಹೋರಾಟ ಮುಂದುವರಿಸುವುದಾಗಿ ಹಾಗೂ ಚಾಲುಕ್ಯ ಉತ್ಸವಕ್ಕೆ ತೊಂದರೆಯಾಗದಂತೆ ಶಾಂತಿಯುತ ಹೋರಾಟ ನಡೆಸಲಾಗುವುದು, ಚಾಲುಕ್ಯ ಉತ್ಸವ ನಂತರ 8-10 ದಿನ ಕಾದು, ಹೋರಾಟ ತೀವ್ರಗೊಳಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ತಿಳಿಸಿದರು.
ರಬಕವಿ ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಸಿಪಿಐ ಎಚ್. ಆರ್. ಪಾಟೀಲ, ಪಿಎಸ್ಐ ಕಿರಣ್ ಸತ್ತಿಗೇರಿ ಮತ್ತು ತಾಲೂಕು ಹೋರಾಟಗಾರರಾದ ಮುಖಂಡರಾದ ಧರೆಪ್ಪ ಸಾಂಗ್ಲೀಕರ, ರಂಗನಗೌಡ ಪಾಟೀಲ, ಮಹಾದೇವ ಮರಾಪುರ, ಮಾರುತಿ ಕರೋಶಿ, ಸಿದ್ದಪ್ಪ ಶಿರೋಳ, ಹಣಮಂತ ಜಮಾದಾರ, ಶಿವಾನಂದ ಅಂಗಡಿ, ಡಿ.ಬಿ. ನಾಗನೂರ, ಮಹಾಲಿಂಗಪ್ಪ ಅವರಾದಿ, ಅಣ್ಣಪ್ಪ ಕಾಮಗೌಡರ, ಈಶ್ವರ ಮುರಗೋಡ, ವಿನೋದ ಉಳ್ಳೆಗಡ್ಡಿ, ದುಂಡಪ್ಪ ಇಟ್ನಾಳ, ಪರಶು ಕೊಣ್ಣೂರ, ರಫೀಕ್ ಮಲದಾರ, ಕರೆಪ್ಪ ಮೇಟಿ, ರಾಜೇಂದ್ರ ಮಿರ್ಜಿ, ಭೀಮಶಿ ಸಸಲಾಟ್ಟಿ, ಬಸಪ್ಪ ಉಳ್ಳಾಗಡಿ, ಕಲೀಲ್ ಮುಲ್ಲಾ, ಲಕ್ಷ್ಮಣ ಕಿಲಾರಿ, ಚಿದಾನಂದ ಧರ್ಮಟ್ಟಿ, ಹನುಮಂತ ರಡರಟ್ಟಿ, ಶರಣು ಹಡಪದ, ಅಲ್ಲಪ್ಪ ದಡ್ಡಿಮನಿ, ಚಿದಾನಂದ ಚಿಂದಿ, ರಾಜು ತೇರದಾಳ, ದುಂಡಪ್ಪ ಚನ್ನಾಳ, ಚನ್ನು ದೇಸಾಯಿ,ಬಂದು ಪಕಾಲಿ, ಮಲ್ಲಪ್ಪ ಸಂಗಣ್ಣವರ ಸೇರಿದಂತೆ ಇತರರಿದ್ದರು.ಲಾಠಿ ಏಟು ತಿನ್ನಲು ಸಿದ್ಧ: ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಮಹಾಲಿಂಗಪುರ ತಾಲೂಕು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ನಡೆಯುತ್ತಿರುವ ಸಂಧಾನ ಸಭೆ ಹೊಸದೇನಲ್ಲ, ಈ ಹಿಂದೆ ಉಪವಾಸ ಸತ್ಯಾಗ್ರಹ ನಿರತರಾದ ಸಂದರ್ಭದಲ್ಲಿ ಮತ್ತು ತದನಂತರ ಮಹಾಲಿಂಗಪುರದಿಂದ ನೂರಾರು ಜನರ ನಿಯೋಗ ಬೆಂಗಳೂರಿಗೆ ಹೋಗಿದ್ದು ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡದೆ ಮರಳಿ ಕಳಿಸಲಾಗಿದೆ. ಈ ತರಹದ ನೂರಾರು ನೋವು ಮತ್ತು ನಿರಾಸೆಗಳನ್ನು ಹೊಂದಿರುವ ನಾವು ಈಗ ಯಾವುದೇ ಭರವಸೆಗಳಿಗೆ ಬಗ್ಗುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ. ಸಮಯ ಬಂದರೆ ನಾವು ಬೆಂಕಿ ಹಚ್ಚಲು ಸಿದ್ಧ, ಲಾಠಿ ಏಟು ತಿನ್ನಲು ಮತ್ತು ಜೈಲಿಗೆ ಹೋಗಲು ಸಿದ್ಧ. ಆದರೆ ತಾಲೂಕು ಹೋರಾಟ ಬಿಟ್ಟು ಕೊಡುವುದಿಲ್ಲ ಎಂದು ಸಭೆ ಬಹಿಷ್ಕರಿಸಿ ಹೊರನಡೆದರು. ಧರಣಿ ನಿಲ್ಲಿಸುವ ಪ್ರಯತ್ನ ವಿಫಲವಾಗಿದ್ದರಿಂದ ಅಧಿಕಾರಿಗಳು ಮತ್ತು ಮುಖಂಡರು ಅಲ್ಲಿಂದ ನಿರ್ಗಮಿಸಿದರು.