ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರಿನ ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಟಿ.ನರಸೀಪುರದ ಜೆಎಸ್ಎಸ್ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಎಚ್. ರವಿ ಮಾತನಾಡಿ, ಜಿಲ್ಲೆಯಲ್ಲಿ ಮಣ್ಣಿನ ಆರೋಗ್ಯ ಶೇ. 52.07ರಷ್ಟು ಅನಾರೋಗ್ಯದಿಂದ ಕೂಡಿದೆ. ಶೇ. 48 ರಷ್ಟು ಮಣ್ಣಿನ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. ರೈತರು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕಡೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅಂಗಡಿ ಮಾತನಾಡಿ, ಕೃಷಿ ಸಂಬಂಧಿತ ಎಲ್ಲ ಸರ್ಕಾರಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರ ಜೊತೆ ವಿಕಸಿತ ಕೃಷಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ತಾಂತ್ರಿಕತೆಗಳು ಹಾಗೂ ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜು ಮಾತನಾಡಿ, ಕಳೆದ 13 ದಿನಗಳಿಂದ ಮೈಸೂರು ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಲ್ಲಿ ಪಶು ಸಂಬಂಧಿತ ಸಮಸ್ಯೆಗಳಾದ ಕಾಲುಬಾಯಿ ಜ್ವರ, ಕೆಚ್ಚಲು ಬಾವು ಹಾಗೂ ಇನ್ನಿತರ ಸಮಸ್ಯೆಗಳಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಂಶೋಧನಾ ಇಲಾಖೆಯ ವಿಜ್ಞಾನಿಗಳೊಂದಿಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬೆಂಗಳೂರಿನ ಐಸಿಎಆರ್ನ ಕೃಷಿ ಅಳವಡಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿಗಳಾದ ಡಾ. ಎಂ.ಜೆ. ಚಂದ್ರೇಗೌಡ ಮಾತನಾಡಿ, ಭಾರತ ಶಕ್ತಿ ಎಂದರೆ ಅದು ಕೃಷಿ, ರೈತರು ಸಬಲರಾದರೆ ಭಾರತ ಸಬಲವಾದಂತೆ ಎಂದರು.ಬೆಂಗಳೂರಿನ ಐಸಿಎಆರ್ ಎನ್ಐಎಎನ್ಪಿ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಕಾಜಲ್ ಸಂಕರ್ ರಾಯ್ ಮಾತನಾಡಿ, ನಾವು ಕೈಗೊಂಡ ಸಂಶೋಧನೆಗಳು ರೈತರ ಮಟ್ಟದಲ್ಲಿ ಹೇಗೆ ಉಪಯೋಗವಾಗುತ್ತಿದೆ ಎಂದು ಈ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಿಂದ ತಿಳಿಯುವಂತಾಯಿತು. ಇದರಿಂದಾಗಿ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವ ಪ್ರೇರೇಪಣೆ ದೊರೆತಂತಾಯಿತು ಎಂದರು.
ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಈ ಅಭಿಯಾನಕ್ಕೆ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳು, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಪ್ರಗತಿಪರ ರೈತರು ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು.ಪ್ರಗತಿಪರ ರೈತರಾದ ಕುರುಬೂರು ಸಿದ್ದೇಶ್, ಮಹದೇವಮ್ಮ, ಶಿವಮಲ್ಲಪ್ಪ ಇದ್ದರು. ಕಿರಗಸೂರು ಶಂಕರ್ ರೈತರು ಸಮಸ್ಯೆಗಳನ್ನು ಇಲಾಖೆಯ ಅಧಿಕಾರಿಗಳೊಂದಿಗೆ ಹಂಚಿಕೊಂಡು ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕೆವಿಕೆಯ ಸಿಬ್ಬಂದಿವರ್ಗ, ಕೃಷಿ, ತೋಟಗಾರಿಕೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು, ಅನುವುಗಾರರು ಭಾಗವಹಿಸಿದ್ದರು. ಕೃಷಿ ಸಖಿ ಹಾಗೂ ಪಶು ಸಖಿಯರು, ರೈತರು, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಡಾ. ಬಿ.ಎನ್. ಜ್ಞಾನೇಶ್ ಸ್ವಾಗತಿಸಿದರೆ, ಡಾ. ಜಿ.ಎಂ. ವಿನಯ್ ವಂದಿಸಿದರು. ಡಾ. ವೈ.ಪಿ. ಪ್ರಸಾದ್ ನಿರೂಪಿಸಿದರು.