- ಚನ್ನಗಿರಿಯಲ್ಲಿ ನೋಡಲ್ ಆಧಿಕಾರಿ, ಮತಗಟ್ಟೆಮಟ್ಟದ ಮೇಲ್ವಿಚಾರಕರ ತರಬೇತಿ ಕಾರ್ಯಾಗಾರ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ದಾವಣಗೆರೆ ಜಿಲ್ಲೆ 2ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಹೇಳಿದರು.

ಬುಧುವಾರ ಸಂಜೆ ಪಟ್ಟಣದ ಹೊರ ವಲಯದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ನೋಡಲ್ ಆಧಿಕಾರಿ ಹಾಗೂ ಮತಗಟ್ಟೆ ಮಟ್ಟದ ಮೇಲ್ವಿಚಾರಕರ ತರಬೇತಿ ಶಿಬಿರ ಕಾರ್ಯಗಾರದಲ್ಲಿ ಅವರು ಮಾತನಾಡಿದರು.


ವಿಶೇಷ ಸಮಗ್ರ ಪರಿಷ್ಕರಣೆ ಕರ್ತವ್ಯದಲ್ಲಿ ನಿರತರಾದ ಅಧಿಕಾರಿಗಳು ವಾಹನಗಳನ್ನು ಚಲಿಸುವಾಗ ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್‌ಗಳನ್ನು ಧರಿಸಬೇಕು ಎಂದು ಶಿಬಿರದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರದ ಕೆಲಸ ಮಾಡುವಾಗ ನಮ್ಮ ಜೊತೆಯಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ರಕ್ಷಣೆಯೂ ನಮ್ಮದಾಗಿರುತ್ತದೆ. ಮೊದಲು ಜೀವ ಮುಖ್ಯವಾಗಿದ್ದು, ಚುನಾವಣೆ ಕೆಲಸ ಮಾಡುವಾಗ ಸಹಜವಾಗಿ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ವಾಹನ ಚಾಲನೆ ಮಾಡುವಂತಹ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಸುರಕ್ಷಿತವಾಗಿ ವಾಹನ ನಿಯಮಗಳನ್ನು ಪಾಲನೆ ಮಾಡಿಕೊಂಡು ಮುಂದುವರಿಯಬೇಕು ಎಂದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2,03,628 ಮತದಾರರಿದ್ದು, ಇವರಲ್ಲಿ 1,01,056 ಪುರುಷ ಮತದಾರರಿದ್ದರೆ, 1,02,564 ಮಹಿಳಾ ಮತದಾರರಿದ್ದಾರೆ. ಇದುವರೆಗೂ ನಮ್ಮ ಬಿಎಲ್‌ಒಗಳು 2,00,096 ಮತದಾರರಿಗೆ ಅರ್ಜಿಗಳನ್ನು ವಿತರಣೆ ಮಾಡಿದ್ದಾರೆ. ಇವುಗಳಲ್ಲಿ 57,533 ಅರ್ಜಿಗಳನ್ನು ಈಗಾಗಲೇ ಗಣಕೀಕರಿಸಲಾಗಿದೆ ಎಂದು ಡಿಸಿ ತಿಳಿಸಿದರು.

ಈ ಸಂದರ್ಭ ಉಪ ಜಿಲ್ಲಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಚನ್ನಪ್ಪ, ಮತದಾರ ಪಟ್ಟಿ ಪರಿಷ್ಕರಣಾಧಿಕಾರಿ ದಿವಾಕರ್ ರೆಡ್ಡಿ, ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಹೊನ್ನಾಳಿ ತಹಸೀಲ್ದಾರ್ ಗೋವಿಂದಪ್ಪ ಸೇರಿದಂತೆ ಬಿಎಲ್‌ಒಗಳು ಭಾಗವಹಿಸಿದ್ದರು.

- - -

(ಕೋಟ್‌) ಚನ್ನಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ 255, ಬಿಜೆಪಿಯಿಂದ 255, ಜೆಡಿಎಸ್‌ನಿಂದ 43, ಆಮ್ ಆದ್ಮಿ ಪಕ್ಷದಿಂದ 3 ಜನ ಬಿಎಲ್‌ಎಗಳನ್ನು ನೇಮಕ ಮಾಡಿದ್ದು, ಬಿಎಲ್‌ಒಗಳು ಅರ್ಜಿಗಳನ್ನು ವಿತರಣೆ ಮಾಡುವ ಸಂದರ್ಭ ಆಯಾ ಬೂತ್‌ಗಳಿಗೆ ವಿವಿಧ ರಾಜಕೀಯ ಪಕ್ಷಗಳಿಂದ ನೇಮಕಗೊಂಡ ಬಿಎಲ್‌ಎಗಳನ್ನು ಕರೆದುಕೊಂಡು ಹೋಗಬೇಕು.

- ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

- - -

-9ಕೆಸಿಎನ್‌ಜಿ1:

ಚನ್ನಗಿರಿ ಕ್ಷೇತ್ರದ ನೋಡಲ್ ಆಧಿಕಾರಿ, ಮತಗಟ್ಟೆ ಮಟ್ಟದ ಮೇಲ್ವಿಚಾರಕರ ತರಬೇತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿದರು.