ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಪಟ್ಟಣದಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ ಇನ್ನೂ ಆರಂಭವಾಗಿಲ್ಲ. ಕ್ಯಾಂಟೀನ್‍ಗಾಗಿ ಖರೀದಿಸಿರುವ ಸಾಮಗ್ರಿಗಳು ಧೂಳು ತಿನ್ನುತ್ತಿದ್ದು, ಎರಡು ವರ್ಷ ಕಳೆದರೂ ಇಂದಿರಾ ಕ್ಯಾಂಟೀನ್‌ನಿಂದ ಒಂದು ಕಪ್ ಚಹಾ ಕೂಡ ಯಾರಿಗೂ ಸಿಕ್ಕಿಲ್ಲ!ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕ್ಯಾಂಟೀನ್‌ ಬಗ್ಗೆ ಚರ್ಚೆ ನಡೆಯಿತಲ್ಲದೆ ಶಾಸಕ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡರು.ಈ ಇಂದಿರಾ ಕ್ಯಾಂಟೀನ್‌ಗೆ 80 ಲಕ್ಷ ರು. ವೆಚ್ಚ ಮಾಡಲಾಗಿದೆ. ಈವರೆಗೂ ಇದರ ಕಾರ್ಯ ಆರಂಭಗೊಂಡಿಲ್ಲ. ಗುತ್ತಿಗೆದಾರ ಮತ್ತು ಎಂಜಿನಿಯರ್‌ಗಳ ಭ್ರಷ್ಟಾಚಾರದಿಂದ ಕ್ಯಾಂಟೀನ್‍ಗಾಗಿ ಖರೀದಿಸಿರುವ ಸಾಮಗ್ರಿಗಳು ಧೂಳು ತಿನ್ನುತ್ತಿದ್ದು, ಕಟ್ಟಡ ಬೀದಿ ನಾಯಿಗಳ ವಾಸಸ್ಥಾನವಾಗಿದೆ ಎಂದು ಅವರು ಆರೋಪಿಸಿದರು.ಇಂದಿರಾ ಕ್ಯಾಂಟೀನ್ ಯೋಜನೆಯೇ ದೊಡ್ಡ ವಂಚನೆಯಾಗಿದ್ದು ಕಾಂಗ್ರೆಸ್ ಪರ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದೆ. ಸರ್ಕಾರದ ಅನುದಾನವನ್ನು ಹೇಗೆ ದುರ್ಳಬಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇದೊಂದು ನಿದರ್ಶನ ಕೂಡ ಆಗಿದೆ ಎಂದೂ ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.ಪ್ರತಿಪಕ್ಷದ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಸಂದೇಶ್ ಜವಳಿ ಕಳೆದ ಸುಮಾರು ಹತ್ತು ದಿನಗಳಿಂದ ಕೆಸರು ಮಿಶ್ರಿತ ನೀರು ಸರಬರಾಜಾಗುತ್ತಿದೆ. ಮಳೆಗಾಲದಲ್ಲಿ ನೀರು ಸ್ವಲ್ಪ ಮಟ್ಟಿಗೆ ಕಲುಷಿತಗೊಳ್ಳುವುದು ಸಹಜವಾದರೂ ಸರಿಯಾದ ರೀತಿಯಲ್ಲಿ ಟ್ರೀಟ್‍ಮೆಂಟ್ ಮಾಡದ ಕಾರಣ ಈ ಸಮಸ್ಯೆ ಉದ್ಭವವಾಗಿದೆ ಎಂದರು.ಸದಸ್ಯ ಬಿ.ಗಣಪತಿ ಮಾತನಾಡಿ, ಲಾಗಾಯ್ತಿನಿಂದ ಇರುವ ಸಮಸ್ಯೆ ಪರಿಹರಿಸಲು ಆಧುನಿಕ ಫಿಲ್ಟರ್ ಮುಂತಾದ ಅಗತ್ಯವಾದ ಕ್ರಮ ಕೈಗೊಳ್ಳಬೇಕಿದೆ ಎಂದರು. ಪಟ್ಟಣ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ಉತ್ತಮ ಸೇವೆ ನೀಡುವ ಸಲುವಾಗಿ ಹೆಚ್ಚುವರಿಯಾಗಿ ಎರಡು ಓವರ್ ಹೆಡ್ ಟ್ಯಾಂಕ್ ನಿರ್ಮಿಸುವ ಅಗತ್ಯವಿದೆ ಎಂದು ಸದಸ್ಯ ಜಯಪ್ರಕಾಶ್ ಶೆಟ್ಟಿ ಆಗ್ರಹಿಸಿದರು.ಪಪಂ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೇ ಬಾಳೇಬೈಲು ಬಡಾವಣೆಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಯತಿರಾಜ್ ದೂರಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಪಂ ಜಾಗದಲ್ಲೇ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಆಡಳಿತ ಮೌನವಾಗಿದೆ ಎಂದು ಶಾಸಕರೂ ದನಿಗೂಡಿಸಿದರು.ಪಟ್ಟಣ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಸರಿಯಾದ ಕ್ರಮ ಇಲ್ಲದ ಕಾರಣ ಸಾರ್ವಜನಿಕರು ನಡೆದಾಡುವುದಕ್ಕೂ ಕಷ್ಟ ಪಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಳ್ಳುವ ಕಟ್ಟಡಗಳ ನೆಲ ಅಂತಸ್ತಿನಲ್ಲಿ ಪಾರ್ಕಿಂಗ್ ಇರುವಂತೆ ಕಡ್ಡಾಯಗೊಳಿಸುವುದು ಸೂಕ್ತ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಾ ಈ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯ ಡಾ, ಅನಿಲ್ ಆಗ್ರಹಿಸಿದರು.ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ. ರಾಜು, ಸದಸ್ಯರಾದ ರಹಮತ್ ಉಲ್ಲಾ ಅಸಾದಿ, ರಾಘವೇಂದ್ರ ಶೆಟ್ಟಿ, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ರವೀಶ್ ಭಟ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.-------------------ಫೋಟೊ 09 ಟಿಟಿಎಚ್ 01:

ತೀರ್ಥಹಳ್ಳಿ ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪಪಂ ಸಾಮಾನ್ಯ ಸಭೆ ನಡೆಯಿತು.