ಸಾರಾಂಶ
ಫೋಟೋ- 27ಎಂವೈಎಸ್37
----ಕನ್ನಡಪ್ರಭ ವಾರ್ತೆ ಮೈಸೂರುಅಕ್ಷರಶಃ ಚುನಾವಣಾ ಸೋಲಿನ ಭಯಕ್ಕೆ ಒಳಗಾಗಿರುವ ಪ್ರಧಾನಿ ಮೋದಿಯವರು ಇಂಡಿಯಾ ಮೈತ್ರಿಕೂಟ ಗೆದ್ದರೆ ಎಲ್ಲಾ ಮೀಸಲಾತಿಯನ್ನು ಮುಸ್ಲೀಮರಿಗೆ ಕೊಡುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ಸ್ಥಾನದ ಘನತೆಯನ್ನು ಹಾಳು ಮಾಡುತ್ತಿದ್ದಾರೆ. ಜನದ್ವೇಷಿ ವ್ಯಕ್ತಿಯೇ ಪ್ರಧಾನಿ ಆಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.ಸಮಾಜದ ಎಲ್ಲಾ ಸಮುದಾಯಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಇವರು ತಾವೇ ಮುಂದೆ ನಿಂತು ಸಮುದಾಯಗಳ ನಡುವೆ ಒಡಕು ತರಲು ಹೊರಟಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ದೇಶ ವಿಭಜನೆಯ ಸಂದರ್ಭದಲ್ಲಿ ಸಾಕಷ್ಟು ಮಂದಿ ಮುಸ್ಲೀಮರು ನೆರೆಯ ಪಾಕಿಸ್ತಾನಕ್ಕೆ ಹೋದರೆ, ಬಹಳಷ್ಟು ಮಂದಿ ಮುಸ್ಲೀಮರು ಭಾರತವನ್ನು ಒಪ್ಪಿ ಇಲ್ಲೇ ಉಳಿದರು. ಬಾಬಾ ಸಾಹೇಬರು ಹೇಳುವಂತೆ, ದೇಶ ವಿಭಜನೆಉ ನಂತರದಲ್ಲಿ ಈ ದೇಶದ ಅಲ್ಪಸಂಖ್ಯಾತರು ಈ ದೇಶದ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು, ನಮ್ಮೊಂದಿಗೆ ಇರಲು ಬಯಸಿದ್ದು ಅವರನ್ನು ರಕ್ಷಣೆ ಮಾಡಿ, ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಹೇಳುತ್ತಾರೆ. ಹೀಗಿರುವಾಗ ಪ್ರಜಾಪ್ರಭುತ್ವದಲ್ಲಿ ಜನರಿಂದ ಅಧಿಕಾರ ಪಡೆದ ಪ್ರಧಾನಿಗಳೇ ಸಮುದಾಯಗಳ ನಡುವೆ ಬಿರುಕು ಉಂಟು ಮಾಡಲು ಹೊರಟಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.ಇನ್ನೂ ದೇಶ ವಿಭಜನೆಯ ನಂತರದಲ್ಲಿ ಬಹಳಷ್ಟು ಕೋಮುವಾದಿ ಮನಸ್ಸುಗಳು ದೇಶ ವಿಭಜನೆ ಆಗಬಾರದಿತ್ತು, ಅದೊಂದು ಘೋರ ಸಂಗತಿ, ಇದಕ್ಕೆ ಗಾಂಧೀಜಿಯೇ ಕಾರಣ ಎಂದೆಲ್ಲಾ ಹೇಳುತ್ತಿರುವುದನ್ನು ನಾವು ಆಗಾಗ್ಗೆ ಕೇಳಿರುತ್ತೇವೆ. ಆದರೆ ಇವರೆಲ್ಲಾ ಈ ದಿನ ಮುಸ್ಲೀಮರನ್ನು ಇಷ್ಟೊಂದು ದ್ವೇಷಿಸುವುದನ್ನು ನೋಡುವಾಗ, ಒಂದು ವೇಳೆ ದೇಶ ವಿಭಜನೆ ಆಗದೇ ಇದ್ದಿದ್ದರೆ, ಇವರೇನೂ ಮುಸ್ಲೀಮರನ್ನು ಪ್ರೀತಿಯಿಂದ ಕಂಡು ಬಿಡುತ್ತಿದ್ದರಾ ಎಂಬ ಅನುಮಾನ ಕಾಡುತ್ತದೆ. ಏನೇ ಆಗಲಿ ಭಾರತೀಯ ಪ್ರಜೆಗಳಾದ ನಾವು ಎಂದು ನಮಗೆ ತಿಳಿ ಹೇಳುವ ಸಂವಿಧಾನವನ್ನು ಮರೆತು ವರ್ತಿಸುವ ಪ್ರಧಾನಿಗಳು ಎಂದಿಗೂ ಕ್ಷಮಾರ್ಹರಲ್ಲ ಎಂದು ತಿಳಿಸಿದ್ದಾರೆ. ದೇವದೂತ ಬಂದ ನಂತರವೇ....ದೇವದೂತ ಬಂದ ನಂತರವೇ 72 ರೂ. ಇದ್ದ ಪೆಟ್ರೋಲ್ ಬೆಲೆ 100 ರೂ. ಏರಿತು. 60 ರೂ. ಇದ್ದ ಡೀಸೆಲ್ 85ಕ್ಕೆ ಏರಿಕೆಯಾಯಿತು. ಡಾಲರ್ ಎದುರು ರೂಪಾಯಿಯು ಭಾರೀ ಕುಸಿತ ಕಂಡಿತು. ಅಡುಗೆ ಸಿಲಿಂಡರ್ ಬೆಲೆ 400 ರಿಂದ 1000 ರೂ. ಏರಿಕೆ ಕಂಡಿತು. ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು. ಭಾರತ ಜಾಗತಿಕ ಹಸಿವಿನ ಸೂಚ್ಯಾಂಕದಲ್ಲಿ 55 ರಿಂದ 102ನೇ ಸ್ಥಾನಕ್ಕೆ ಕುಸಿಯಿತು. ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು ಎಂದು ಕಿಡಿಕಾರಿದ್ದಾರೆ.ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ದೊರಕದೇ ಲೆಕ್ಕವಿಲ್ಲದಷ್ಟು ಸಾವು ನೋವುಗಳಾಯಿತು. ಚೀನಾವು ಗಡಿ ಪ್ರದೇಶದಲ್ಲಿ ಭಾರತವನ್ನು ಆಕ್ರಮಿಸಿ ತನ್ನ ಗ್ರಾಮಗಳನ್ನು ನಿರ್ಮಿಸಿತು. ಕೋಮುದ್ವೇಷ ಹೆಚ್ಚಾಗಿ ಸಾಮರಸ್ಯದ ವಾತಾವರಣ ಹಾಳಾಯಿತು. ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು. ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು ಕೋರ್ಟ್ ಮೆಟ್ಟಿಲೇರಿ ಪಡೆಯುವಂತೆ ಆಯಿತು ಎಂದು ಕುಟುಕಿದ್ದಾರೆ.ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು. ಯೋಜನೆಗಳ ಸಮೇತ ಇದ್ದ ದೇಶದ ಸಾಲವು 55 ಲಕ್ಷ ಕೋಟಿಗಳಿಂದ ಯೋಜನೆಗಳಿಲ್ಲದಂತೆ 185 ಲಕ್ಷ ಕೋಟಿಗೆ ಏರಿಕೆ. ಕಾರ್ಪೊರೇಟ್ ಧಣಿಗಳು ಹೆಚ್ಚು ಶ್ರೀಮಂತರಾಗಿ, ಬಡವರು ಕಣ್ಣು ಬಾಯಿ ಬಿಡುವಂತೆ ಆಯಿತು. ದೇಶದ ಒಳಗಡೆ, ಅಜ್ಞಾನ, ಮೌಢ್ಯತೆ, ಸಾಮಾಜಿಕ ಮತ್ತು ರಾಜಕೀಯ ಅಸಹನೆಯು ಹೆಚ್ಚಾಯಿತು. ಇಂತಹ ಅಪದ್ದಗಳನ್ನು ಮಾಡುವುದಾಕ್ಕಾಗಿಯೇ ಆತ ದೇವದೂತನಾಗಿ ಬರಬೇಕಾಯಿತು ಎಂಬುದು ನಮ್ಮ ಕಾಲದ ಮಹಾ ದುರಂತಗಳಲ್ಲಿ ಒಂದು ಎಂಬುದಾಗಿ ಪ್ರಧಾನಿ ಅವರ ಮಾತಿಗೆ ಡಾ. ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.