ಸಾರಾಂಶ
ಜಿಲ್ಲಾಸ್ಪತ್ರೆ ಸರ್ಜನ್ ಅಮಾನತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ
ಜಿಲ್ಲಾಸ್ಪತ್ರೆ ಸರ್ಜನ್ ಅಮಾನತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ ಒತ್ತಾಯಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಕಲಿ ವೈದ್ಯಕೀಯ ಸರ್ಟಿಫಿಕೇಟ್ಗಳನ್ನು ನೀಡಿ ನಿಜವಾಗಿಯೂ ಶ್ರವಣದೋಷವುಳ್ಳವರಿಗೆ ವಂಚನೆ ಮಾಡಿರುವ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಪಿ.ರವೀಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ ಒತ್ತಾಯಿಸಿದರು.ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹದಿನೈದು ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಜ್ಞರಾಗಿದ್ದ ಡಾ.ಪಿ.ರವೀಂದ್ರ ಲಂಚ ಪಡೆದು ಯಾವುದೇ ದೋಷವಿಲ್ಲದವರಿಗೂ ಶ್ರವಣ ದೋಷವಿದೆ ಎಂದು ಸರ್ಟಿಫಿಕೇಟ್ಗಳನ್ನು ನೀಡಿದ್ದಾರೆ.
ಸಲೀಸಾಗಿ ಕಿವಿ ಕೇಳಿಸುವವರಿಗೆ ದೋಷವಿದೆ ಎಂದು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡಿ ಸರ್ಕಾರದ ನೌಕರಿ ಸೇರಿದಂತೆ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಅರ್ಹರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ರೀತಿ ಸುಳ್ಳು ದಾಖಲೆ ನೀಡಿ ಚಿತ್ರದುರ್ಗ ಬೆಸ್ಕಾಂನಲ್ಲಿ 8 ಮಂದಿ ಕೆಲಸ ಪಡೆದಿರುವುದನ್ನು ತನಿಖೆ ನಡೆಸುವಂತೆ ಒತ್ತಾಯಿಸಿದಾಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯವರು ಪರಿಶೀಲಿಸಿ ಒಬ್ಬರಿಗೆ ಮಾತ್ರ ಕಿವಿ ಕೇಳಿಸಲ್ಲ, ಉಳಿದ ಏಳು ಮಂದಿಗೆ ಶ್ರವಣ ದೋಷವಿಲ್ಲ ಎಂಬ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ವಾಕ್ ಶ್ರವಣ ಸಂಸ್ಥೆಯವರು ಪರಿಶೀಲಿಸಿದಾಗ ಡಾ.ಪಿ.ರವೀಂದ್ರ ನೀಡಿರುವ ಸರ್ಟಿಫಿಕೇಟ್ಗಳು ಸುಳ್ಳು ಎನ್ನುವುದು ಖಾತ್ರಿಯಾಗಿದೆ. ಆದ್ದರಿಂದ ಅವರನ್ನು ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಚಂದ್ರಪ್ಪಘಾಟ್, ತಿಪ್ಪೇಸ್ವಾಮಿ ಬೆಳಗಟ್ಟ, ಕೃಷ್ಣಪ್ಪ, ಪ್ರಹ್ಲಾದ್, ದೇವರಾಜ್ ಇದ್ದರು.