ಹಾವೇರಿ: ಚಲನಚಿತ್ರಗಳು, ಚಳವಳಿಗಳ ಮೂಲಕ ಕನ್ನಡದ ಭಾಷೆ, ಕನ್ನಡಿಗರ ಸ್ವಾಭಿಮಾನ, ಸಂಸ್ಕೃತಿ, ನಮ್ಮ ಪರಂಪರೆಗಳ ಮೌಲ್ಯಗಳನ್ನು ಎತ್ತಿಹಿಡಿದ ಕರ್ನಾಟಕ ಕಂಡ ಮೇರು ವ್ಯಕ್ತಿತ್ವದ ಮಹೋನ್ನತ ನಟ ಡಾ. ರಾಜಕುಮಾರ್ ಎಂದು ಶಾಸಕ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಹೇಳಿದರು.ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ ವರನಟ ಡಾ.ರಾಜಕುಮಾರ್ ಅವರ 97ನೇ ಜಯಂತಿ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ರಾಜಕುಮಾರ್ ಅವರು ಕೇವಲ ನಟರಾಗಿ ಉಳಿಯದೆ ಗಾಯಕರಾಗಿ, ಕನ್ನಡ ನಾಡು-ನುಡಿಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ರಂಗಭೂಮಿ, ಚಲನಚಿತ್ರ, ಗಾಯನದಲ್ಲಿ ಅತ್ಯುತ್ತಮವಾದ ಪ್ರತಿಭೆ ಹೊಂದಿದ ಡಾ. ರಾಜಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳು, ಹಾಡಿದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ ಹಾಗೂ ಸಾಮಾಜಿಕವಾಗಿ ಉತ್ತಮ ಪರಿಣಾಮ ಬೀರಿವೆ. ಅವರು ಅಭಿನಯಿಸಿದ ಹಲವು ಆಧ್ಯಾತ್ಮೀಕ ಪೌರಾಣಿಕ ಪಾತ್ರಗಳು ಜನರ ಮನಸ್ಸಿನಲ್ಲಿ ಇನ್ನೂ ಆಳವಾಗಿ ಬೇರೂರಿವೆ ಎಂದು ಹೇಳಿದರು.ಚಲನಚಿತ್ರ ಗೀತೆಗಳು: ಸಮಾರಂಭದ ಅಂಗವಾಗಿ ಆಯೋಜಿಸಲಾದ ಡಾ. ರಾಜಕುಮಾರ್ ಅವರ ಚಲನಚಿತ್ರಗಳ ಗೀತೆಗಳ ಗಾಯನ ಕಾರ್ಯಕ್ರಮ ಸಮಾರಂಭಕ್ಕೆ ವಿಶೇಷ ಮೆರಗು ನೀಡಿತು. ಗಾಯಕರಾದ ಶಿವಬಸವ ಬಣಕಾರ ಅವರು ಹಾಡಿದ ಡಾ. ರಾಜಕುಮಾರ್ ಅಭಿಯನದ ಹಳೆಯ ಚಿತ್ರಗೀತೆಗಳು ಎಲ್ಲರನ್ನೂ ರಂಜಿಸಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್., ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ, ಹಾವೇರಿ ವೈದ್ಯಕೀಯ ಕಾಲೇಜ್ ಆಡಳಿತ ಮಂಡಳಿ ಸದಸ್ಯ ಶಂಕರ ಸುತಾರ ಇತರರು ಇದ್ದರು.