ಬಾಗಲಕೋಟೆ: ಮುಂಗಾರು ಮಳೆ ಅಭಾವದಿಂದ ರಾಜ್ಯದ ಬಹುತೇಕ ಜಲಾಶಯಗಳಿಗೆ ಇನ್ನೂ ಸಮರ್ಪಕ ಒಳಹರಿವು ಆರಂಭವಾಗದ ಹಿನ್ನೆಲೆಯಲ್ಲಿ, ಆಲಮಟ್ಟಿ ಜಲಾಶಯದಲ್ಲಿರುವ ಲಭ್ಯವಿರುವ ನೀರನ್ನು ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ ಎಂದು ಆಲಮಟ್ಟಿ ಆಣೆಕಟ್ಟೆ ವೃತ್ತದ ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ರೈತರು ಸರ್ಕಾರದ ನಿರ್ದೇಶನದನುಸಾರ ಜನ-ಜಾನುವಾರುಗಳ ಕುಡಿವ ನೀರಿನ ಹಿತದೃಷ್ಟಿಯಿಂದ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿವ ನೀರಿನ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹಾಗೂ ರಾಜ್ಯ ಜಲನೀತಿಯ ಪ್ರಕಾರ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಿರುವುದರಿಂದ ಜಲಾಶಯದಲ್ಲಿರುವ ನೀರನ್ನು ಈ ಉದ್ದೇಶಕ್ಕಾಗಿಯೇ ಕಾಯ್ದಿರಿಸಲು ಸೂಚಿಸಲಾಗಿದೆ ಎಂದು ಆಲಮಟ್ಟಿ ಆಣೆಕಟ್ಟು ವೃತ್ತದ ಅಧೀಕ್ಷಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.