ದ್ವಾರಕೋತ್ಸವ: ಸನ್ಮಾನ, ಪ್ರತಿಭಾ ಪುರಸ್ಕಾರ, ಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ

| Published : Feb 17 2025, 12:33 AM IST

ಸಾರಾಂಶ

ದ್ವಾರಕಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ೫ನೇ ವರ್ಷದ ‘ದ್ವಾರಕೋತ್ಸವ’-೨೦೨೫ ಸನ್ಮಾನ, ಪ್ರತಿಭಾ ಪುರಸ್ಕಾರ, ದ್ವಾರಕಾ ಪ್ರಕಾಶನದಿಂದ ಹೊಸ ಪುಸ್ತಕ ಬಿಡುಗಡೆ, ವಿಚಾರಗೋಷ್ಠಿ, ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಅರ್ಥಶಾಸ್ತ್ರದ ಪ್ರಕಾರ ಶ್ರೀಮಂತರು ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಾರೆ. ಕೋಟ್ಯಂತರ ರುಪಾಯಿ ವ್ಯವಹಾರ ಮಾಡಿ ಉದ್ಯೋಗ ಸೃಷ್ಟಿಸಿ ಸಮಾಜಕ್ಕೆ ಕೊಡುಗೆ ನೀಡುವುದೂ ದೊಡ್ಡ ಸಮಾಜ ಸೇವೆಯಾಗಿದೆ. ಕಾನೂನು ಬದ್ಧವಾಗಿ ಶ್ರೀಮಂತಿಕೆಯನ್ನು ಸಂಪಾದಿಸುವುದು ದೇಶಕ್ಕೆ ದೊಡ್ಡ ಆರ್ಥಿಕತೆ ನಿರ್ಮಿಸಿದಂತಾಗುತ್ತದೆ. ಕಾನೂನು ಬದ್ಧವಾಗಿ ಸಂಪಾದಿಸಿ ಉದ್ಯೋಗ ನೀಡಿ, ತೆರಿಗೆ ಕಟ್ಟುವ ಮೂಲಕವೂ ದೇಶಕ್ಕೆ ಕೊಡುಗೆ ನೀಡಬಹುದು ಎಂದು ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.ಅವರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆದ ೫ನೇ ವರ್ಷದ ‘ದ್ವಾರಕೋತ್ಸವ’-೨೦೨೫ ಸನ್ಮಾನ, ಪ್ರತಿಭಾ ಪುರಸ್ಕಾರ, ದ್ವಾರಕಾ ಪ್ರಕಾಶನದಿಂದ ಹೊಸ ಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ, ಸಾಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಮಕ್ಕಳ ತಜ್ಞರು ಹಾಗೂ ಆಪ್ತ ಸಲಹೆಗಾರರಾಗಿರುವ ಡಾ.ಸುಲೇಖಾ ವರದರಾಜ್ ಮಾತನಾಡಿ, ದ್ವಾರಕಾ ಸಂಸ್ಥೆಯ ಮೂಲಕ ಹಲವು ಮನೆ ಮತ್ತು ಮನಗಳನ್ನು ಒಂದುಗೂಡಿಸುವ ಗೌರವದ ಕೆಲಸ ಮಾಡಿದೆ. ಅಭಿವೃದ್ಧಿಯ ಜೊತೆಗೆ ಸಮಾಜ ಸೇವೆಯ ಮೂಲಕ ಜೀವನದ ವಿಕಸವೂ ಮುಖ್ಯವಾಗಿದ್ದು, ದ್ವಾರಕ ಸಂಸ್ಥೆಯು ಮಾಡಿ ತೋರಿಸಿದೆ. ಜೀವನದ ಅರ್ಥ ಉದ್ದೇಶಗಳ ಪರಿಚಯ ಮೂಡಿಸುವ ಜೊತೆಗೆ ಮಕ್ಕಳ ಪರಿಪೂರ್ಣ ವಿಕಸನಕ್ಕೆ ಪೂರಕವಾದ ಕಾರ್ಯವು ದ್ವಾರಕಾ ಪ್ರತಿಷ್ಠಾನದಿಂದ ನಡೆಯುತ್ತಿದೆ ಎಂದರು.ಸಾಹಿತಿ ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.

ಮಿತ್ತೂರು ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ. ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಗ.ನಾ. ಭಟ್ ಮೈಸೂರು ರಚಿಸಿದ ‘ಸತಿ ಸಾವಿತ್ರಿ’ ಪುಸ್ತಕದ ಬಗ್ಗೆ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಪರಿಚಯ ಮಾಡಿದರು. ಕೃಷ್ಣಮೂರ್ತಿ ಕೆಮ್ಮಾರ ಅವರ ‘ಪುರಾಣ ರಸಪ್ರಶ್ನಾವಲೀಯ’ವನ್ನು ಯುವ ಬರಹಗಾರ ನವೀನಕೃಷ್ಣ ಎಸ್. ಉಪ್ಪಿನಂಗಡಿ ಪರಿಚಯ ಮಾಡಿದರು.

ದ್ವಾರಕಾ ಪ್ರರಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹೊಸ ಕೃತಿಗಳ ಬಿಡುಗಡೆ:ವಿದ್ವಾನ್ ಗ.ನಾ ಭಟ್ ಅವರ ಸತಿ ಸಾವಿತ್ರಿ, ಕೃಷ್ಣಮೂರ್ತಿ ಕೆಮ್ಮಾರ ಅವರ ಪುರಾಣ ರಸ ಪ್ರಶ್ನಾವಳಿ ಮತ್ತು ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಪರಿಷ್ಕರಣೆ ಮತ್ತು ಪರಿವರ್ಧನೆ ಮಾಡಿದ ವೇದ ವಸಂತ ಮತ್ತು ವೇದ ಮಾಧವ ಕೃತಿಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತ್ತು. ಬಳಿಕ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿಯು ನಡೆಯಿತು. ಸನ್ಮಾನ, ಪ್ರತಿಭಾ ಪುರಸ್ಕಾರಸಾವಯವ ಕೃಷಿ ಕ್ಷೇತ್ರದ ಸಾಧಕ ಸುಬ್ರಹ್ಮಣ್ಯ ಭಟ್ಟ ನೆಕ್ಕರೆಕಳೆಯ, ಭಾರತೀಯ ಸೇನೆ, ಕೃಷಿ ಹಾಗೂ ಸಮಾಜ ಸೇವೆಯಲ್ಲಿ ಡಾ.ಗೋಪಾಲಕೃಷ್ಣ ಕಾಂಚೋಡು, ಯಕ್ಷಗಾನ ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸ್ವಸ್ತಿಕ್ ಭಟ್ ಮುರ್ಗಜೆ, ಸಾಮಾಜಿಕ ಜಾಲತಾಣ ಹಾಗೂ ಆಹಾರೋದ್ಯಮದಲ್ಲಿ ಸುದರ್ಶನ ಭಟ್ಟ ಬೆದ್ರಡಿ ಅವರನ್ನು ಸನ್ಮಾನಿಸಲಾಯಿತು.

ದ್ವಾರಕ ಕಲಾ ಶಾಲೆಯ ಮೂಲಕ ಕೀ ಬೋರ್ಡ್, ಚೆಂಡೆ, ಮದ್ದಲೆ ತರಬೇತಿ ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ ಸ್ವಾಗತಿಸಿದರು. ಅಮೃತ ಕೃಷ್ಣಾ ವಂದಿಸಿದರು. ನವೀನಕೃಷ್ಣಾ ಉಪ್ಪಿನಂಗಡಿ ಹಾಗೂ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.