ಸಾರಾಂಶ
ಪೊನ್ನಂಪೇಟೆ : ದಕ್ಷಿಣ ಕೊಡಗಿನ ಮಾಯಾಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗೊಲ್ಲಿಯಲ್ಲಿ ಎರಡು ದಿನಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಜಾನಕಿ (52)ಮೇಲೆ ದಾಳಿ ನಡೆಸಿ ಬಲಿಪಡೆದಿದ್ದ ಕಾಡಾನೆಯನ್ನು ಶನಿವಾರ ಸೆರೆ ಹಿಡಿಯಲಾಗಿದೆ. ಆನೆ ಸೆರೆ ಹಿಡಿಯಲು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ. ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಪರಿಸ್ಥಿತಿಯ ಗಂಭೀರತೆ ತಿಳಿಸಿದ ಹಿನ್ನೆಲೆ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು.
ಕಾರ್ಯಾಚರಣೆಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ನಡೆಸಿದೆ. ತಕ್ಷಣ ಕಾಡಾನೆ ಸೆರೆಗೆ ಅನುಮತಿ ಒದಗಿಸಿ ಕಾರ್ಯಾಚರಣೆ ಯಶಸ್ವಿಯಾಗಲು ಶಾಸಕ ಪೊನ್ನಣ್ಣ ಅವರಿಗೆ ಸಂಕೇತ್ ಪೂವಯ್ಯ ಅಭಿನಂದನೆ ತಿಳಿಸಿದ್ದಾರೆ.
ವ್ಯಾಲೈಂಟೈನ್ಸ್ ಡೇ ದಿನವೇ ಉರಗಗಳ ಮಿಲನ
ಸಮೀಪದ ನೆಲಜಿಯಲ್ಲಿ (ವ್ಯಾಲೈಂಟೈನ್ಸ್ ಡೇ) ಪ್ರೇಮಿಗಳ ದಿನಾಚರಣೆಯಂದೇ ಉರಗಗಳ ಮಿಲನದ ದೃಶ್ಯವೊಂದು ಸೆರೆಯಾಗಿದೆ. ತಮ್ಮ ಸರಸ ಸಲ್ಲಾಪಕ್ಕೆ ಈ ಪ್ರೇಮಿಗಳು ಆರಿಸಿಕೊಂಡ ಜಾಗ, ಕಾಫಿ ಕಣ. ನೆಲಜಿ ಗ್ರಾಮದ ನಾಪನೆರವಂಡ ಲೀನಾ ದೇವಯ್ಯ ಅವರ ಮನೆಯ ಸಮೀಪಕಾಫಿ ಒಣಗಲು ಹರಡಿದ್ದ (ಅಂಗಲ) ಕಣದಲ್ಲಿ ಕಾಫಿಯ ಮೇಲೆಯೇ ಫೆ. 14 ರಂದು ಶುಕ್ರವಾರ ಕೆರೆ ಹಾವುಗಳೆರಡು ಯಾರಿಗೂ ಭಯ ಪಡದೆ ತಮ್ಮದೇ ಲೋಕದಲ್ಲಿ ವಿಹರಿಸಿದ್ದವು.