ಕನ್ನಡಪ್ರಭ ವಾರ್ತೆ ಕೊಲ್ಹಾರ

ಈರುಳ್ಳಿ ದರ ಭಾರಿ ಕುಸಿದ ಹಿನ್ನೆಲೆಯಲ್ಲಿ ರೈತ ಕಂಗಾಲಾಗಿದ್ದು , ಕೂಡಲೇ ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಈರುಳ್ಳಿ ದರ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಒತ್ತಾಯಿಸಿದರು.

ತಾಲೂಕಿನ ಮಟ್ಟಿಹಾಳ ಗ್ರಾಮದ ರೈತ ಮಂಜುನಾಥ ಅವರ ಈರುಳ್ಳಿ ಜಮೀನಿಗೆ ಭೇಟಿ ನೀಡಿ ಮಾತನಾಡಿ, ರೈತ ಚೆನ್ನಾಗಿ ಈರುಳ್ಳಿ ಬೆಳೆಸಿದ್ದಾರೆ. ಆದ್ದರಿಂದ ಒಳ್ಳೆಯ ಇಳುವರಿ ಕೂಡ ಬಂದಿದೆ. ಆದರೆ ಇದರಲ್ಲಿ 10 ಕ್ವಿಂಟಲ್ ಈರುಳ್ಳಿಯನ್ನು 800 ಕ್ವಿಂಟಲ್‌ನಂತೆ ಮಾರಾಟ ಮಾಡಿದ್ದಾರೆ. ಈರುಳ್ಳಿ ಪ್ರತಿ ಕೆಜಿಗೆ ₹20 ರಿಂದ ₹30ಕ್ಕೆ ಮಾರಾಟವಾಗಬೇಕು. ಆದರೆ ಪ್ರತಿ ಕೆಜಿಗೆ ₹8 ಮಾರಾಟವಾದರೆ ರೈತ ಹೇಗೆ ಬದುಕಬೇಕು? ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು ₹1 ಲಕ್ಷ ಖರ್ಚಾಗುತ್ತದೆ. ಹೀಗಾಗಿ ಈರುಳ್ಳಿ ಬೆಳೆಗಾರರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಪಿಎಂಸಿ ಸಚಿವ ಶಿವಾನಂದ ಪಾಟೀಲರು ರೈತರ ಸಹಾಯಕ್ಕೆ ಬರಬೇಕು. ಇಂದು ಕಬ್ಬು ಬೆಳೆಗಾರರನ್ನು ರಕ್ಷಿಸಿದಂತೆ ಈರುಳ್ಳಿ ಬೆಳೆಗಾರರನ್ನು ರಕ್ಷಿಸಬೇಕು ಎಂದರು.ಈರುಳ್ಳಿ ಇಲ್ಲದೆ ಊಟ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಈರುಳ್ಳಿ ಬೇಕೆ ಬೇಕು. ರೈತ ಪ್ರತಿ ಬೆಳೆಗಳಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕಾರಣ ಈರುಳ್ಳಿಗೆ ಒಂದು ಪರ್ಯಾಯ ಬೆಲೆ ನಿಗದಿ ಮಾಡಿ ಈರುಳ್ಳಿ ಬೆಳೆಗಾರರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ ಮಾತನಾಡಿ, ನಮ್ಮ ರೈತರು ಈ ಭಾಗದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ಆದರೆ ಅವರಿಗೆ ಸರಿಯಾದ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಈರುಳ್ಳಿ ಖರೀದಿದಾರರು. ರೈತರು ಬೆಳೆದ ಈರುಳ್ಳಿ ಕೈಗೆ ಬಂದಾಗ ಖರೀದಿದಾರರು ಏಕಾಏಕಿ ದರ ಕಡಿಮೆ ಮಾಡುವುದು ಸುಮಾರು ವರ್ಷಗಳಿಂದ ನಡೆಯುತ್ತಿದೆ. ಇವತ್ತು ನಾವು ವ್ಯಾಪಾರಿಗಳಿಗೆ ಎಚ್ಚರಿಕೆ ಕೊಡುತ್ತೇವೆ. ಪ್ರತಿ ಕೆಜಿ ಈರುಳ್ಳಿಗೆ ಕನಿಷ್ಠ ₹20 ಆದರೂ ಕೊಡಲೇಬೇಕು. ಸರ್ಕಾರ ಯೋಗ್ಯವಾದ ಬೆಲೆಯಲ್ಲಿ ಈರುಳ್ಳಿಯನ್ನು ರೈತರಿಂದ ಖರೀದಿ ಮಾಡಬೇಕು. ಸಚಿವ ಶಿವಾನಂದ ಪಾಟೀಲರು ವಿಜಯಪುರ ಜಿಲ್ಲೆಯವರು. ಹೀಗಾಗಿ ಕೃಷಿ ಮಾರುಕಟ್ಟೆ ಸಚಿವರು ಇರುವುದರಿಂದ ಈ ಭಾಗದ ಈರುಳ್ಳಿ ಬೆಳೆಗಾರರಿಗೆ ಅನಕೂಲು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಈ ವೇಳೆ ರೈತ ಸಂಘದ ತಾಲೂಕಾಧ್ಯಕ್ಷ ಸೋಮು ಬಿರಾದಾರ, ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೋಳ, ಶ್ರೀಶೈಲ ಬಾಡಗಿ, ಮುದಕಣ್ಣ ಚಲವಾದಿ, ಸತ್ಯಪ್ಪ ಕುಳ್ಳೊಳ್ಳಿ, ಯಲ್ಲಪ್ಪ ಗೂಳಗೊಂಡ, ಹಲವಾರು ರೈತರು ಇದ್ದರು.