ನಿವೃತ್ತ ಮುಖ್ಯಾಧಿಕಾರಿ ಜಿ.ಪ್ರಕಾಶ್‌ಗೆ ಪುರಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭ

ಕನ್ನಡಪ್ರಭ ವಾರ್ತೆ, ಬೀರೂರು

ಅಧಿಕಾರಿ ಮತ್ತು ನೌಕರರು ಅವರ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೇ ಜನರ ಮೆಚ್ಚುಗೆ ಗಳಿಸಬಹುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್ ಹೇಳಿದರು.ಪುರಸಭೆಯಲ್ಲಿ ಗುರುವಾರ ನಿವೃತ್ತ ಮುಖ್ಯಾಧಿಕಾರಿ ಜಿ.ಪ್ರಕಾಶ್‌ಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಅಧಿಕಾರವಿದ್ದಾಗ ಗಳಿಸುವ ಹಣ ಶಾಶ್ವತವಲ್ಲ. ಆದರೆ ನಾವು ಸಂಪಾದಿಸಿದ ಜನರ ಪ್ರೀತಿ, ವಿಶ್ವಾಸ, ಕೀರ್ತಿ ಸದಾ ನಮ್ಮ ಜೊತೆ ಇರುತ್ತದೆ. ಸರ್ಕಾರಿ ನೌಕರರಿಗೆ ನಿವೃತ್ತಿ ಕಟ್ಟಿಟ್ಟ ಬುತ್ತಿ. ನಿವೃತ್ತ ಜೀವನವನ್ನು ಆರೋಗ್ಯಕ್ಕೆ ಒತ್ತು ನೀಡುವ ಮೂಲಕ ಕಳೆಯಬೇಕು. ಕರ್ತವ್ಯದಲ್ಲಿದ್ದಾಗ ಪ್ರತಿ ದಿನ ಚಟುವಟಿಕೆಯ ಬದುಕು ನಡೆಯುತ್ತಿರುತ್ತದೆ. ನಿವೃತ್ತಿ ನಂತರ ಚಟುವಟಿಕೆಯಿಲ್ಲದೆ ಅನಾರೋಗ್ಯ ಉಂಟಾಗಬಹುದು ಹೀಗಾಗಿ ಕಾಲಕಾಲಕ್ಕೂ ಆರೋಗ್ಯ ತಪಾಸಣೆಗೆ ಒಳಗಾಗುವುದು ಒಳಿತು ಎಂದರು.

ಆಶ್ರಯ ಕಮಿಟಿ ಸದಸ್ಯ ಮುಬಾರಕ್ ಮಾತನಾಡಿ ಹಲವು ವರ್ಷಗಳಿಂದ ಬೀರೂರು ಪುರಸಭೆಯಲ್ಲಿ ಎಸ್.ಡಿಎ, ಎಫ್.ಡಿಎ, ವ್ಯವಸ್ಥಾಪಕರಾಗಿ ಪಟ್ಟಣದ ಜನರ ಆಳ-ಅರಿತು ಪ್ರಾಮಾಣಿಕ ಕೆಲಸದ ಮೂಲಕ ಬೀರೂರು ಪಟ್ಟಣದಲ್ಲಿ ಜಿ.ಪ್ರಕಾಶ್ ಮನಗೆದ್ದಿದ್ದಾರೆ ಎಂದರು.ಪುರಸಭೆ ಮಾಜಿ ಸದಸ್ಯ ಬಿ.ಎಂ.ರುದ್ರಪ್ಪ ಮಾತನಾಡಿ, ಬಡವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಸರ್ಕಾರಿ ಅಧಿಕಾರಿ ಮಾಡಬೇಕು. ಸಿಕ್ಕಂತಹ ಅಮೂಲ್ಯ ಅವಧಿಯಲ್ಲಿ ಬಡವರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿದ್ದಾರೆ ಎಂದರು.ಆಶ್ರಯ ಕಮಿಟಿ ಇನ್ನೋರ್ವ ಸದಸ್ಯ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಸರ್ಕಾರಿ ನೌಕರಿ ಪಡೆದ ಪ್ರತಿಯೊಬ್ಬರು ಸಾರ್ವಜ ನಿಕರ ಸೇವೆಗೆ ಹೆಚ್ಚು ಸಮಯ ನೀಡಬೇಕು. ಇಲಾಖೆ ವ್ಯಾಪ್ತಿಯಲ್ಲಿ ಸಿಗುವ ಸೌಲಭ್ಯ ಬಡ ಜನರಿಗೆ ನೀಡಿ ಅವರ ಸಮಸ್ಯೆ ಬಗೆಹರಿಸಬೇಕು ಎಂದರು.ಸರ್ಕಾರಿ ಅಧಿಕಾರಿಗೆ ನಿವೃತ್ತಿ ಅನಿವಾರ್ಯ. ನಿವೃತ್ತಿಗೂ ಮುನ್ನ ಆ ಅಧಿಕಾರಿ ನಿರ್ವಹಿಸಿದ ಕರ್ತವ್ಯ ಪ್ರಾಮುಖ್ಯತೆ ಪಡೆದಿದೆ. ಚುನಾಯಿತ ಪ್ರತಿನಿಧಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮುಖ್ಯಾಧಿಕಾರಿ ಪ್ರಕಾಶ್ ಮಾಡಿದ್ದರು ಎಂದು ಮೆಲುಕು ಹಾಕಿದರು.ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಾಧಿಕಾರಿ ಜಿ.ಪ್ರಕಾಶ್, ಗೌರವ ಆತ್ಮೀಯತೆ ವಿಶ್ವಾಸದಿಂದ ಮಾತ್ರ ಸಮಾಜದಲ್ಲಿ ಎಲ್ಲರನ್ನು ಗೆಲ್ಲಲು ಸಾಧ್ಯ. ಸೇವೆಗೆ ಸೇರಿದ ದಿನದಿಂದಲು ಈ ವೃತ್ತಿ ನನಗೆ ಆತ್ಮತೃಪ್ತಿ ತಂದಿದೆ. ಸರ್ಕಾರಿ ನೌಕರಿಗೆ ಸೇರಿದ ಪ್ರತಿಯೊಬ್ಬರು ಮೊದಲು ಸಮಯ ಪಾಲನೆ ಕಲಿಯಬೇಕು. ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಪ್ರೀತಿಯಿಂದ ವರ್ತಿಸಿ ಅವರ ಸಮಸ್ಯೆ ಬಗೆಹರಿಸುವತ್ತ ತಮ್ಮ ಚಿತ್ತ ಹೆಚ್ಚಾಗಿರಬೇಕು. ಸಾರ್ವಜನಿಕರನ್ನು ಯಾರೋ ಒಬ್ಬ ವ್ಯಕ್ತಿ ಕೆಲಸ ಮಾಡದೆ ಅಲೆದಾಡಿಸುವುದು ಇಡೀ ಕಚೇರಿ ಗೌರವ ಕುಂದಿಸುತ್ತದೆ. ಪುರಸಭೆಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದಲು ತನಗೆ ಉತ್ತಮ ಕಾರ್ಯನಿರ್ವಹಿಸಲು ಸಹಕರಿಸಿದ ಶಾಸಕರಿಗೆ ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.ಪುರಸಭೆ ಪೌರ ನೌಕರರ ಸಂಘದ ಅಧ್ಯಕ್ಷೆ ಜಯಮ್ಮ, ಮಲ್ಲಿಕಾರ್ಜುನ್ ಮಾತನಾಡಿದರು. ಕಂದಾಯ ಅಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ರೇಣುಕಮ್ಮ, ಶಿಲ್ಪ, ವೀಣಾ, ಪ್ರದೀಪ್, ಲಿಂಗರಾಜು, ಕರಿಯಪ್ಪ, ಪುರಸಭೆ ಪೌರ ಕಾರ್ಮಿಕರು, ನೀರುಗಂಟಿಗಳು ಹಾಗೂ ಸಾರ್ವಜನಿಕರು ಇದ್ದರು.

30 ಬೀರೂರು 1ಬೀರೂರಿನ ಪುರಸಭೆ ಸಭಾಂಗಣದಲ್ಲಿ ಗುರುವಾರ ನಿವೃತ್ತಿ ಹೊಂದಿದ ಮುಖ್ಯಾಧಿಕಾರಿ ಜಿ.ಪ್ರಕಾಶ್ ರನ್ನು ಪುರಸಭೆ ಸಿಬ್ಬಂದಿ ಸನ್ಮಾನಿಸಿದರು. ಕಂದಾಯಧಿಕಾರಿ ಮಂಜುನಾಥ್, ಲಕ್ಷ್ಮಣ್, ಜಯಮ್ಮ ಸೇರಿದಂತೆ ಮತ್ತಿತರಿದ್ದರು.