ಕನ್ನಡಪ್ರಭ ವಾರ್ತೆ ವಿಜಯಪುರ

ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಣಕ್ಕಿದೆ. ಬದುಕಿನುದ್ದಕ್ಕೂ ಕಲಿಯುವುದು ಬಹಳಷ್ಟಿದೆ. ವಿದ್ಯಾರ್ಥಿ ಜೀವನದಲ್ಲಿ ಬರುವ ಸವಾಲುಗಳನ್ನು, ಕಷ್ಟಗಳನ್ನು ಎದುರಿಸಿ ಮುನ್ನುಗ್ಗಬೇಕು. ಶಿಸ್ತು, ನಡೆ-ನುಡಿ, ಸಮಯಪಾಲನೆ ವಿದ್ಯಾರ್ಥಿಗಳ ಭವಿಷ್ಯವನ್ನು ಸದೃಢಗೊಳಿಸುತ್ತವೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ ಹೇಳಿದರು.

ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪರಿಚಯಾತ್ಮಕ ಕಾರ್ಯಾಗಾರ ದೀಕ್ಷಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ದೇವರು ಅದ್ಭುತ ಶಕ್ತಿ ಕೊಟ್ಟಿರುತ್ತಾನೆ. ಅದನ್ನು ಗುರುತಿಸುವ, ಉತ್ತೇಜಿಸುವ ಕೆಲಸವಾಗಬೇಕು. ನಾವು ಬಳಸುವ ಭಾಷೆ, ನಮ್ಮಲ್ಲಿರುವ ವಿಶೇಷ ಕೌಶಲಗಳು ನಮ್ಮನ್ನು ಉತ್ತುಂಗಕ್ಕೆ ಒಯ್ಯುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಬಿ.ಕಮತಿ ಮಾತನಾಡಿ, ನಾವು ಮಾಡುವ ಪ್ರತಿ ಪ್ರಯತ್ನಗಳು ಸಾಧನೆಗೆ ಪೂರಕವಾಗುತ್ತವೆ. ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟಿರಬೇಕು. ನಿರ್ದಿಷ್ಟ ಗುರಿ, ಸತತ ಅಧ್ಯಯನವೇ ವಿದ್ಯಾರ್ಥಿಗಳ ಉದ್ದೇಶವಾಗಬೇಕು ಎಂದು ಕಿವಿಮಾತು ಹೇಳಿದರು.

ಉಪಪ್ರಾಚಾರ್ಯ ಪ್ರೊ.ಎಸ್.ಎ.ಪಾಟೀಲ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಹೇಶ ಮಳವಾಡೇಕ್ದರು, ಐ.ಕ್ಯೂ.ಎ.ಸಿ ಸಂಯೋಜಕ ವಿನಯ ದರ್ಬಿ, ಕಾರ್ಯಾಗಾರ ಸಂಯೋಜಕ ಹನುಮೇಶ ನಾಯಕ, ಡಾ.ರವೀಂದ್ರಗೌಡ ಕೃಷ್ಣಪ್ಪ, ವಿಜಯಮಹಾಂತೇಶ ಬಳಗಾನೂರ, ವಿಜಯಕುಮಾರ ತಳವಾರ, ಶಿವಾನಂದ ಮಠಪತಿ, ಸಚಿನ ಮಗರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಸುಲ್‌ಬಿ ಮುಲ್ಲಾ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮಠ ಪರಿಚಯಿಸಿ, ಸ್ವಾಗತಿಸಿದರು. ಪ್ರೊ.ಪಲ್ಲವಿ ಪವಾರ ನಿರೂಪಿಸಿದರು. ಪ್ರೊ.ಸ್ನೇಹಾ ಬೆನಕಟ್ಟಿ ವಂದಿಸಿದರು.