ಸಾರಾಂಶ
ರಾಣಿಬೆನ್ನೂರು: ವಿದ್ಯೆ ನಮ್ಮಲ್ಲಿರುವ ಸುಪ್ತ ಸಂಪತ್ತಾಗಿದ್ದು, ಅದನ್ನು ಖರ್ಚು ಮಾಡಿದಷ್ಟು ಹೆಚ್ಚಾಗುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಸ್ಥಳೀಯ ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚೆನ್ನೇಶ್ವರ ಮಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಿರಂತರ ಅನ್ನದಾಸೋಹದ ಜೊತೆಗೆ ನಿರಂತರ ಜ್ಞಾನ ದಾಸೋಹ ಪ್ರತಿ ಮಾಸಿಕ ಜ್ಞಾನವಾಹಿನಿಯ ಮೂಲಕ ನಡೆದಿದೆ. ಮಕ್ಕಳ ಚಿತ್ತ ಪ್ರಗತಿಪಥದತ್ತ ಸಾಗಲಿ ಎಂದರು. ನಮ್ಮ ಚಿತ್ತ ಗುರು ಭಕ್ತಿಯತ್ತ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಬ್ಯಾಡಗಿಯ ಉಪನ್ಯಾಸಕ ಸಿದ್ದಲಿಂಗಸ್ವಾಮಿ ಉಜ್ಜಯಿನಿಮಠ ಮಾತನಾಡಿ, ಶ್ರದ್ಧೆಯಿದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ. ವಿದ್ಯಾರ್ಥಿಯ ಜೀವನವನ್ನು ಬಂಗಾರ ಮಯವಾಗಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು. ಸಮಾರಂಭದಲ್ಲಿ ಲಿಂಗವಂತ ಸಮಾಜ ನಿವೃತ್ತ ನೌಕರರ ಸಂಘದ ವತಿಯಿಂದ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಚಂದನಾ ಆರ್.ಎಲ್., ಲಿಂಗರಾಜ ಬಿದರಿ, ಗಾಯತ್ರಿ ಕುಪ್ಪೇಲೂರ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಪ್ರಯುಕ್ತ ಜರುಗಿದ ವಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಸವರಾಜಪ್ಪ ಪಟ್ಟಣಶೆಟ್ಟಿ, ಬಿದ್ದಾಡೆಪ್ಪ ಚಕ್ರಸಾಲಿ, ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಎಸ್.ಎನ್. ಜಂಗಳೇರ, ಎಸ್.ಎಮ್. ಸಂಕಮ್ಮನವರ, ವಿಶ್ವನಾಥಯ್ಯ ಗುರುಪಾದದೇವರಮಠ, ಶಿವಯೋಗಿ ಹಿರೇಮಠ, ವಿ.ವಿ.ಹರಪನಹಳ್ಳಿ, ಕಸ್ತೂರಿ ಪಾಟೀಲ, ವಿ.ಎಂ. ಕರ್ಜಗಿ, ಜ್ಯೋತಿ ಬಣ್ಣದ, ಹಾಲಸಿದ್ದಯ್ಯ ಶಾಸ್ತ್ರಿ, ರಾಚಯ್ಯ ಹಿರೇಮಠ ಹಾಗೂ ತಾಲೂಕು ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು, ಲಿಂಗವಂತ ಸಮಾಜದ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.