- ದೇವಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಚುನಾವಣೆ

ಫೋಟೋ - 4ಎಂವೈಎಸ್‌ 62ಕನ್ನಡಪ್ರಭ ವಾರ್ತೆ ಮೈಸೂರುಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ತಾಲೂಕಿನ ವರುಣ ಹೋಬಳಿಯ ದೇವಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ ಚುನಾವಣೆ ವಿನೂತನ ರೀತಿಯಲ್ಲಿ ನಡೆಯಿತು.ಒಟ್ಟು 23 ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತದಾರರಾಗಿ ಉತ್ಸಾಹದಿಂದ ಭಾಗವಹಿಸಿ ಮತದಾನದ ಹಕ್ಕು ಚಲಾಯಿಸಿದರು.ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಕಾರ್ಯವೈಖರಿಯನ್ನು ಪರಿಚಯಿಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಶನ್‌ ನೆರವಿನಿಂದ ಒಂದು ಮೊಬೈಲ್ ಉಪಕರಣವನ್ನು ಕಂಟ್ರೋಲಿಂಗ್ ಯೂನಿಟ್ ಆಗಿಯೂ, ಮತ್ತೊಂದು ಮೊಬೈಲ್ ಉಪಕರಣವನ್ನು ಬ್ಯಾಲೆಟ್ ಯೂನಿಟ್ ಆಗಿಯೂ ಬಳಸಿಕೊಂಡು ಮತದಾನ ಪ್ರಕ್ರಿಯೆ ನಡೆಸಲಾಯಿತು. ಈ ವಿನೂತನ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸಿತು.ಮತದಾನ ಆರಂಭಕ್ಕೂ ಮುನ್ನ ಸಮಾಜ ವಿಜ್ಞಾನ ಶಿಕ್ಷಕ ರಾಘವೇಂದ್ರ ಅವರು, ಮತದಾನದ ವಿಧಾನ, ಮತದಾರರ ಕರ್ತವ್ಯ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತಯಾಚನೆ ನಡೆಸಿ, ತಾವು ಆಯ್ಕೆಯಾದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಕೈಗೊಳ್ಳಲಿರುವ ಯೋಜನೆಗಳನ್ನು ವಿದ್ಯಾರ್ಥಿಗಳ ಮುಂದೆ ಮಂಡಿಸಿದರು.ಶಿಕ್ಷಕ ಆರ್. ನರೇಂದ್ರ ಅವರು ಚುನಾವಣಾಧಿಕಾರಿಯಾಗಿ, ಎಂ.ಎಸ್. ಕಲಾಪೂರ್ಣ ಅವರು ಮೊದಲ ಮತಗಟ್ಟೆ ಅಧಿಕಾರಿಯಾಗಿ ಹಾಗೂ ಜಾಯ್ಸಿ ಎಂ. ಸುಳ್ಳದ್ ಅವರು ಎರಡನೇ ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಿ.ಎಸ್. ಹರ್ಷ ಅವರು ಮೈಕ್ರೋ ಅಬ್ಸರ್ವರ್ ಆಗಿ ಕರ್ತವ್ಯ ನಿರ್ವಹಿಸಿದರು. ಎಂ. ಮನೋಹರ ಮತ್ತು ಎನ್. ಲಕ್ಷ್ಮಣ ಅವರು ಶಾಂತಿ ಹಾಗೂ ಸುವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸಿದರು.ಶಾಲೆಯ ಮುಖ್ಯ ಶಿಕ್ಷಕ ಬಿ. ಸಿದ್ದರಾಜು ಅವರು ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.ಚುನಾವಣೆಯಲ್ಲಿ ಆಯ್ಕೆಯಾದ 16 ವಿದ್ಯಾರ್ಥಿಗಳನ್ನು ಒಳಗೊಂಡ ಶಾಲಾ ಸಚಿವ ಸಂಪುಟ ರಚಿಸಲಾಯಿತು. ಅನಿತಾ ಪ್ರಧಾನಮಂತ್ರಿಯಾಗಿ, ರಾಹುಲ್ ಉಪ ಪ್ರಧಾನಮಂತ್ರಿಯಾಗಿ, ಸುದರ್ಶನ್ ರಕ್ಷಣಾ ಮತ್ತು ಗೃಹ ಸಚಿವರಾಗಿ, ಅನುಶ್ರೀ ಸಹಾಯಕ ರಕ್ಷಣಾ ಸಚಿವರಾಗಿ, ಎಂ. ಪಲ್ಲವಿ ಸ್ವಚ್ಛತಾ ಸಚಿವರಾಗಿ, ರಾಕೇಶ್ ಸಹಾಯಕ ಸ್ವಚ್ಛತಾ ಸಚಿವರಾಗಿ, ಹರೀಶ್ ರಾಜ್ ಶಿಕ್ಷಣ ಮತ್ತು ವಾರ್ತಾ ಸಚಿವರಾಗಿ, ಬಿಂದುಶ್ರೀ ಸಹಾಯಕ ಶಿಕ್ಷಣ ಸಚಿವರಾಗಿ, ಅಮೃತ ಸಾಂಸ್ಕೃತಿಕ ಸಚಿವರಾಗಿ, ನವ್ಯಶ್ರೀ ಸಹಾಯಕ ಸಾಂಸ್ಕೃತಿಕ ಸಚಿವರಾಗಿ, ಹರ್ಷ ಕ್ರೀಡಾ ಸಚಿವರಾಗಿ, ಮನೋಜ್ ಸಹಾಯಕ ಕ್ರೀಡಾ ಸಚಿವರಾಗಿ, ಚಂದನಾ ಕುಡಿಯುವ ನೀರು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ, ತೇಜಸ್ವಿನಿ ಸಹಾಯಕ ಆಹಾರ ಸಚಿವರಾಗಿ, ನಿತಿನ್ ಕುಮಾರ್ ತೋಟಗಾರಿಕೆ ಸಚಿವರಾಗಿ ಹಾಗೂ ನಾಗೇಂದ್ರ ನಾಯಕ ಸಹಾಯಕ ತೋಟಗಾರಿಕಾ ಸಚಿವರಾಗಿ ಆಯ್ಕೆಯಾದರು.