ಸಮಾಜದ ಒಳಿತಿಗಾಗಿ ಶ್ರಮಿಸಿದ ಶರಣರ ಆದರ್ಶ ಮೈಗೂಡಿಸಿಕೊಳ್ಳಿ

| Published : Jun 16 2025, 01:08 AM IST

ಸಾರಾಂಶ

ಸಮ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾನ್ಯ ಜನರ ಬದುಕು ಹಸನಾಗಬೇಕು. ಅವರ ಬದುಕಿನ ಮೌಲ್ಯವನ್ನು ಗುರುತಿಸಬೇಕು.

ಯಲಬುರ್ಗಾ: ಸಮ ಸಮಾಜದ ಒಳಿತಿಗಾಗಿ ಶ್ರಮಿಸಿದ ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದಲ್ಲಿ ಮಲ್ಲಿನಾಥ ಶರಣರ ೧೯೯ನೇ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಶರಣ ಲಿ. ಚಿದಾನಂದಪ್ಪ ಬಳ್ಳಾರಿ ಅವರ ೩೯ನೇ ಪುಣ್ಯಸ್ಮರಣೆ ಹಾಗೂ ಲಿ. ವೀರಭದ್ರಪ್ಪ ಕುರಕುಂದಿ ಅವರ ನೆನಹು ಕಾರ್ಯಕ್ರಮದಲ್ಲಿ ಮೋಳಿಗೆ ಮಾರಯ್ಯನವರ ವಚನ ಚಿಂತನೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಮ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾನ್ಯ ಜನರ ಬದುಕು ಹಸನಾಗಬೇಕು. ಅವರ ಬದುಕಿನ ಮೌಲ್ಯವನ್ನು ಗುರುತಿಸಬೇಕು. ಜನರಲ್ಲಿರುವ ಕೀಳರಿಮೆ ತೊಲಗಿಸಿ ಆತ್ಮಗೌರವ, ವ್ಯಕ್ತಿಗೌರವದ ವಿವೇಕವನ್ನು ಬಸವಾದಿ ಶರಣರು ಜಾಗ್ರತಗೊಳಿಸಿದರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಎಲ್ಲರೂ ಶರಣರು, ಸಂತರ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಮಕ್ಕಳ್ಳಿಯ ಶ್ರೀ ಶಿವಾನಂದ ಸ್ವಾಮೀಜಿ, ಶಿವನಾಗಯ್ಯ ಹಿರೇಮಠ, ನಿವೃತ್ತ ಪ್ರಾಚಾರ್ಯ ಟಿ. ಬಸವರಾಜ ಮಾತನಾಡಿದರು.

ಪ್ರಮುಖರಾದ ವಿರೂಪಾಕ್ಷಪ್ಪ ರಾಯರಡ್ಡಿ, ಅಮರೇಶ ಗಡಿಹಳ್ಳಿ, ರುದ್ರಪ್ಪ ಹಳ್ಳಿ, ಹನುಮಗೌಡ ಬಳ್ಳಾರಿ, ಅಮರೇಶಪ್ಪ ಬಳ್ಳಾರಿ, ಮಲ್ಲನಗೌಡ ಪಾಟೀಲ್, ಚನ್ನಬಸಪ್ಪ ಬಳ್ಳಾರಿ, ಶಿವಸಂಗಪ್ಪ ಹುಚನೂರು, ರೇಣುಕಪ್ಪ ಮಂತ್ರಿ, ಮರಿಬಸಪ್ಪ ಸಜ್ಜನ್, ಶ್ರೀಕಾಂತಗೌಡ ಮಾಲಿಪಾಟೀಲ್, ಶರಣಪ್ಪ ಮೇಟಿ, ಶರಣಪ್ಪ ಬಳ್ಳಾರಿ, ಗಾಳೆಪ್ಪ ಓಜನಹಳ್ಳಿ, ಅಶೋಕ ಹರ್ಲಾಪುರ ಮತ್ತಿತರರಿದ್ದರು.