ನಗರದಾದ್ಯಂತ ಪ್ಲಾಸ್ಟಿಕ್ ಕಸದ ರಾಶಿಯಿಂದ ಪರಿಸರ ಮಾಲೀನ್ಯ

| Published : May 21 2024, 12:36 AM IST

ಸಾರಾಂಶ

ಸ್ವಚ್ಚ ಭಾರತ ಎಂಬ ಘೋಷಣೆಗೆ ಅಪವಾದವೆಂಬಂತೆ ನಗರದಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ವಸ್ತುಗಳದ್ದೇ ಕಾರುಬಾರು. ರಸ್ತೆ, ಚರಂಡಿ, ಖಾಲಿ ಸೈಟುಗಳಲ್ಲಿ ಪ್ಲಾಸ್ಟಿಕ್ ಸಹಿತ ಕಸದ ರಾಸಿಗಳಿದ್ದು, ನಗರಸಭೆಯು ಪರಿಸರ, ಆರೋಗ್ಯ ಮತ್ತು ಸೌಂದರ್ಯಕ್ಕೆ ಧಕ್ಕೆಯುಂಟಾಗದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಸ್ವಚ್ಚ ಭಾರತ ಎಂಬ ಘೋಷಣೆಗೆ ಅಪವಾದವೆಂಬಂತೆ ನಗರದಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ವಸ್ತುಗಳದ್ದೇ ಕಾರುಬಾರು. ರಸ್ತೆ, ಚರಂಡಿ, ಖಾಲಿ ಸೈಟುಗಳಲ್ಲಿ ಪ್ಲಾಸ್ಟಿಕ್ ಸಹಿತ ಕಸದ ರಾಸಿಗಳಿದ್ದು, ನಗರಸಭೆಯು ಪರಿಸರ, ಆರೋಗ್ಯ ಮತ್ತು ಸೌಂದರ್ಯಕ್ಕೆ ಧಕ್ಕೆಯುಂಟಾಗದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ನಗರದ ಬಿ.ಎಚ್. ರಸ್ತೆಯುದ್ದಕ್ಕೂ ಸಾಕಷ್ಟು ಪೆಟ್ಟಿಗೆ ಅಂಗಡಿ, ಹೋಟೆಲ್‌ಗಳಿದ್ದು ಇಲ್ಲಿ ತಿಂದು, ಕುಡಿದು ಬಿಸಾಡುವ ಪ್ಲಾಸ್ಟಿಕ್ ತಟ್ಟೆ, ಲೋಟ, ಕವರ್‌ಗಳು ಸೇರಿದಂತೆ ಇನ್ನಿತರೆ ಪದಾರ್ಥಗಳು ರಸ್ತೆಗಳ ಅಕ್ಕಪಕ್ಕದ ಚರಂಡಿ, ಫುಟ್‌ಪಾತ್ ಸೇರಿದಂತೆ ರಸ್ತೆಯುದ್ದಕ್ಕೂ ಚಲ್ಲಾಡುತ್ತಿವೆ. ನಗರದ ಪರಿಸರ, ಸೌಂದರ್ಯ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ನೀರು ಸರಾಗವಾಗಿ ಹರಿದು ಹೋಗಬೇಕಾದ ಮೋರಿಗಳಲ್ಲೆಲ್ಲಾ ಪ್ಲಾಸ್ಟಿಕ್ ಲೋಟಗಳು ಚರಂಡಿಗಳ ಆಯಕಟ್ಟಿನ ಜಾಗಗಳನ್ನು ಮುಚ್ಚಿಕ್ಕೊಂಡು ನೀರು ಹರಿಯದಂತೆ ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ಮಿಸಿಕೊಂಡಿವೆ.ಪ್ಲಾಸ್ಟಿಕ್ ವಸ್ತುಗಳನ್ನು ಬ್ಯಾನ್ ಮಾಡಿದರೂ ಬಳಕೆ ಮಾತ್ರ ನಿಲ್ಲುತ್ತಿಲ್ಲ.

ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ: ಪ್ಲಾಸ್ಟಿಕ್ ಲೋಟ, ಕವರ್ ಬಳಸಿ ಬಿಸಾಡುವ ವಸ್ತುಗಳಲ್ಲಿ ಮಳೆ ಅಥವಾ ಚರಂಡಿ ನೀರು ತುಂಬಿಕೊಂಡು ಚಿಕೂನ್ ಗುನ್ಯಾ ಹಾಗೂ ಡೆಂಗ್ಯೂ ಜ್ವರ ಹರಡುವ ಸೊಳ್ಳೆಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಉತ್ಪತ್ತಿಯಾಗಿ ಮಾರಣಾಂತಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಅಂಗಡಿ ಮಾಲೀಕರು, ಗ್ರಾಹಕರುಗಳು, ತರಕಾರಿ ವ್ಯಾಪಾರಸ್ಥರು ಅಳಿದುಳಿದ ಕೊಳೆತ ತರಕಾರಿಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಚರಂಡಿಗಳಿಗೆ ಎಸೆಯುತ್ತಿದ್ದಾರೆ. ಇದರಿಂದ ಚರಂಡಿಗಳು ದುರ್ನಾತ ಬೀರುತ್ತಾ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಸ್ವಚ್ಚತೆ ಕಾಪಾಡಿ ಎಂದು ಬೊಬ್ಬೆ ಹೊಡೆಯುವ ನಗರಸಭೆಯೇ ಅನೈರ್ಮಲ್ಯಕ್ಕೆ ಎಡೆಮಾಡಿಕೊಟ್ಟಂತಾಗಿದ್ದು, ಈ ಬಗ್ಗೆ ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.