ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ವಿಶ್ವ ಪರಿಸರ ದಿನದ ಪ್ರಯುಕ್ತ ಕೊಣನೂರಿನ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಕೆ. ನಾಗರಾಜ್ ಕೋಟೆಕಾರ್ ಮಾತನಾಡಿ, ಪರಿಸರವಿದ್ದರೆ ನಾವು. ಯಾರು ಪರಿಸರವನ್ನು ರಕ್ಷಿಸುತ್ತಾರೋ ಅವರನ್ನು ಪರಿಸರ ರಕ್ಷಿಸುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರತಿಯೊಬ್ಬ ನಾಗರಿಕನು ತಿಳಿದಾಗ ಪರಿಸರ ಜಾಗೃತಿ ಉಂಟಾಗುತ್ತದೆ. ಅನೇಕ ವಿಧದಿಂದ ಪರಿಸರ ಸಂರಕ್ಷಣೆ ಮಾಡಬಹುದು. ಅದರಲ್ಲಿ ಒಂದು ಕ್ರಮ ಮರಗಿಡಗಳನ್ನು ನೆಟ್ಟು ಬೆಳೆಸುವುದು. ಹಾಗಾಗಿ ಇಂದು ಆಶ್ರಮದ ವತಿಯಿಂದ ಆಗಮಿಸುವ ಎಲ್ಲರಿಗೆ ಒಂದೊಂದು ಸಸಿಯನ್ನು ನೀಡಲಾಗುವುದು. ಇದನ್ನು ತಮ್ಮ ಮನೆಯ ಆವರಣದಲ್ಲಿ ನೆಟ್ಟು ಪರಿಸರವನ್ನು ಕಾಪಾಡಿ. ತಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಿ ಪರಿಸರ ರಕ್ಷಣೆಯಲ್ಲಿ ತಾನು ಮುಂದು ಎಂದು ಭಾಗವಹಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡೋಣ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬ್ರಹ್ಮಕುಮಾರೀಸ್ ಎಜುಕೇಶನ್ ಸೊಸೈಟಿಯ ವತಿಯಿಂದ ತೇಗ, ಬೀಟೆ, ನಂದಿ, ಕೂಳಿ, ಹೊನ್ನೆ, ಮಹಾ ಗನಿ, ಹಲಸು, ಮಾವು, ಶ್ರೀಗಂಧ ಇತ್ಯಾದಿ ಗಿಡಗಳನ್ನು ಉಚಿತವಾಗಿ ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಬಿಕೆ ಸುನಂದ, ಸೂರ್ಯನಾರಾಯಣ, ಅಮೃತೇಶ್, ಭಾಗ್ಯಮ್ಮ, ಧನಲಕ್ಷ್ಮಿ, ಬನ್ನೂರು ಭಾಗ್ಯ, ಭಾಗ್ಯ ಅಮೃತೇಶ್, ನಾಗರತ್ನ ಮಂಜಣ್ಣ, ಮಂಜುಳಾ, ಗಾಯತ್ರಿ, ರವಿ, ಪ್ರಸಾದ್ ಮುಂತಾದವರು ಭಾಗವಹಿಸಿದ್ದರು.