ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
೧೨ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಲೌಕಿಕ, ಅಲೌಕಿಕ ಸನ್ನಡತೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಅದರಲ್ಲಿ ಕಾಯಕ, ದಾಸೋಹ ಶರಣ ವಚನಗಳಿಂದ ವಚನಕಾರ್ತಿಯರಿಗೆ ಸಮಾನತೆಯ ಸನ್ಮಾರ್ಗ ದೊರೆಯುವಂತಾಯಿತು ಎಂದು ಕವಿಯತ್ರಿ ಶಿಕ್ಷಕಿ ದಾಕ್ಷಾಯಣಿ ಬಿರಾದಾರ ಹೇಳಿದರು.ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದಿಂದ ನಡೆದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ವಚನಕಾರ್ತಿಯರ ಕಾಯಕ ನಿಷ್ಠೆ ಕುರಿತು ಮಾತನಾಡಿದರು. ವಚನಕಾರ್ತಿಯರು ಬಸವಾದಿ ಪ್ರಮಥರ ಪರಂಪರೆಯಲ್ಲಿಯೇ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು. ನಿಷ್ಠೆ, ಭಕ್ತಿ, ಶ್ರದ್ಧೆ ಪ್ರಾಮಾಣಿಕತೆಯಿಂದ ಕಾಯಕ ಮಾಡಿ ಕಲ್ಯಾಣದಲ್ಲಿ ಬದುಕಬೇಕೆಂಬ ಇಚ್ಚೆಯಿಂದ ಕಾಯಕವೇ ದೇವರು ಎಂಬ ನಂಬಿಕೆಯಿಟ್ಟ ವಚನಕಾರ್ತಿಯರಾದ ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಲಿಂಗಮ್ಮ, ಮಹಾದೇವಿ ಹೀಗೆ ಅನೇಕ ವಚನಕಾರ್ತಿಯರು ಸತ್ಯ ಮಾರ್ಗದಿಂದ ನಡೆದು ಸನ್ಮಾರ್ಗದಲ್ಲಿ ಬದುಕಿನ ಮೌಲ್ಯಗಳನ್ನು ಅರ್ಥೈಸಿಕೊಂಡು ಬಾಳಿ ಬೆಳಗಿದವರು. ಹೀಗಾಗಿ ಶರಣರ ವಚನಗಳಿಂದ ಮಹಿಳೆಯರಿಗೆ ಸಮಾನತೆ ಸಿಗುವಂತಾಯಿತು ಎಂದರು. ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ವಚನಕಾರ್ತಿಯರ ಕಾಯಕ ಪ್ರಜ್ಞೆ, ನಿಷ್ಠೆ, ಕಾಯಕ, ದಾಸೋಹ ಬದುಕಿನ ಮೌಲ್ಯಗಳನ್ನು ಅರ್ಥೈಸಿಕೊಂಡ ೩೩ ವಚನಕಾರ್ತಿಯರು ಶರಣರ ವಚನಗಳು ಬದುಕಿನ ಸೂತ್ರಗಳು ಸನ್ಮಾರ್ಗದಲ್ಲಿ ನಡೆಸುವ ಬದುಕಿನಿಂದ ಮುಕ್ತಿ ಎಂದು ನಂಬಿದವರು. ಬದುಕಿಗೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬಹುದು ಎಂದರು.
ಉಪಾಧ್ಯಕ್ಷ ಎಸ್.ಎ. ಪಾಟೀಲ ಮಾತನಾಡಿದರು. ಸಹದೇವ ನಾಡಗೌಡ, ಬಸವರಾಜ ಒಂಟಗೋಡಿ, ತಾಲೂಕಾಧ್ಯಕ್ಷ ಬಸವರಾಜ (ಅಪ್ಪು) ಇಟ್ಟಂಗಿ, ಗಂಗಾಧರ ಸಾಲಕ್ಕಿ, ಎಂ.ಜಿ. ಯಾದವಾಡ, ಎಸ್.ಎನ್. ಶಿವಣಗಿ, ಮಹಾದೇವ ಹಾಲಳ್ಳಿ, ಚಿದಾನಂದ ಪೋಳ, ಡಾ. ಸೋಮಶೇಖರ ವಾಲಿ, ಡಾ. ವಿ.ಡಿ. ಐಹೊಳ್ಳಿ ದಂಪತಿಗಳು, ಬ್ಯಾಕೋಡ ದಂಪತಿಗಳು ಕಾಶೀನಾಥ ಅಣೆಪ್ಪನವರ, ರಮೇಶ ತೇಲಿ, ಮಲ್ಲಿಕಾರ್ಜುನ ಅಮರಣ್ಣವರ, ಜಗದೀಶ ಮೋಟಗಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ನಿರ್ದೇಶಕ ಡಾ. ಸಂಗಮೇಶ ಮೇತ್ರಿ ವಂದಿಸಿದರು.