ಸಾರಾಂಶ
ದಾಬಸ್ಪೇಟೆ: ಹೊಸ ಕಾರ್ಯಕರ್ತರು ಮತ್ತು ಹಳೆಯ ಕಾರ್ಯಕರ್ತರ ಭೇದ-ಭಾವವವಿಲ್ಲದೆ ಸೇರ್ಪಡೆ ಕಾರ್ಯ ಮಾಡಿದ್ದೇವೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಟಿ.ಬೇಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಯಾದ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಮೆಚ್ಚಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮುಖಂಡರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಸೋಂಪುರ-ಸೋಲೂರು ಭಾಗದಲ್ಲಿ ಹಲವಾರು ಮುಖಂಡರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ಮಾತನಾಡಿ, ಡಾ.ಸುಧಾಕರ್ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ್ದರೂ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ. ಇದೀಗ ಮತ್ತೆ ಲೋಕಸಭಾ ಚುನಾವಣೆಗೆ ನಿಂತಿದ್ದು ಇಲ್ಲಿಯೂ ಸೋಲುತ್ತಾರೆ ಎಂದು ಹೇಳಿದರು.
ಮತ್ತೆ ಎಚ್ಡಿಕೆ ಕಣ್ಣೀರು ಹಾಕ್ತಾರೆ:ಹಿಂದೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಕುಮಾರಸ್ವಾಮಿ, ಕುಮಾರಸ್ವಾಮಿ ಅವರನ್ನು ಡಾ. ಸುಧಾಕರ್ ಅವರೂ ಪರಸ್ಪರ ಹೀನಾಯವಾಗಿ ಬೈದಾಡಿಕೊಂಡಿದ್ದಾರೆ. ಇದೀಗ ಇಬ್ಬರೂ ಸೇರಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು, ಅವರಿಗೆ ಸ್ವಲ್ಪವೂ ಆತ್ಮಾಭಿಮಾನ ಅನ್ನುವುದೇ ಇಲ್ಲ. ಇವರ ಈ ಮೈತ್ರಿ ಲೋಕಸಭಾ ಚುನಾವಣೆಗೆಷ್ಟೇ ಸೀಮಿತ. ಮುಂದೆ ಜಿಪಂ, ತಾಪಂ ಚುನಾವಣೆ ಬಂದಾಗ ಈ ಮೈತ್ರಿ ಕೊನೆಯಾಗುತ್ತದೆ. ಆ ಬಳಿಕ ಮೋದಿ ನನಗೆ ಅನ್ಯಾಯ ಮಾಡಿದರೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ದಿನ ಕಣ್ಣೀರು ಹಾಕಲಿದ್ದಾರೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು ತೆರೆದಿದ್ದಾರೆ:ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ನಾಲ್ಕೈದು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವೂ ಸೇರಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರಿಬ್ಬರೂ ಸೇರಿ ಮೆಡಿಕಲ್ ಕಾಲೇಜು ತೆರೆದಿದ್ದಾರೆ. ಹಾಗಾಗಿ ಅಮಿತ್ ಶಾ ಅವರ ಮೇಲೆ ಸುಧಾಕರ್ ಒತ್ತಡ ಹೇರಿದ ಮೇಲೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಪೆಯಿಂಟ್ ಮಂಜುನಾಥ್, ಅನಂತರಾಜು, ಮಂಜುನಾಥ್ ಸೇರಿ ಸುಮಾರು 300ಕ್ಕೂ ಹೆಚ್ಚು ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಮಾಚೋನಾಯ್ಕನಹಳ್ಳಿ ನಾಗರಾಜು, ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ಹಿರಿಯ ವಕೀಲ ಕೆ.ಕೇಶವಮೂರ್ತಿ, ಓಬಾಳಪುರ ಹನುಮಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ರಂಗಸ್ವಾಮಿ, ಜಗದೀಶ್, ಖಲೀಂಉಲ್ಲಾ, ಭಾಸ್ಕರ್, ರಂಗನಾಥ್, ಮುನಿರಾಜು, ಹಸಿರುವಳ್ಳಿ ಕುಮಾರ್, ನೂರಾರು ಮುಖಂಡರು ಹಾಜರಿದ್ದರು.
ಪೋಟೋ 1 : ಟಿ.ಬೇಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಮುಖಂಡರು ಶಾಸಕ ಎನ್.ಶ್ರೀನಿವಾಸ್ ಹಾಗೂ ಮಾಜಿ ಎಂಎಲ್ಸಿ ಕಾಂತರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.