ಕ್ಷಯರೋಗ ಮುಕ್ತ ಹಾವೇರಿ ಜಿಲ್ಲೆಗೆ ಎಲ್ಲರೂ ಶ್ರಮಿಸಿ: ಡಾ. ವಿಜಯಮಹಾಂತೇಶ ಮನವಿ

| Published : Mar 25 2025, 12:45 AM IST

ಕ್ಷಯರೋಗ ಮುಕ್ತ ಹಾವೇರಿ ಜಿಲ್ಲೆಗೆ ಎಲ್ಲರೂ ಶ್ರಮಿಸಿ: ಡಾ. ವಿಜಯಮಹಾಂತೇಶ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷಯರೋಗದ ಕುರಿತು ಆರಂಭದ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ನೀಡಿದರೆ ಕ್ಷಯರೋಗ ಗುಣಪಡಿಸಬಹುದು.

ಹಾವೇರಿ: ಕ್ಷಯರೋಗದ ಬಗ್ಗೆ ಇರುವ ಮೂಢನಂಬಿಕೆ ಹೋಗಲಾಡಿಸಬೇಕು. ಕ್ಷಯರೋಗ ತಡೆಗೆ ಜಾಗೃತಿ ಮೂಡಿಸಬೇಕು ಹಾಗೂ ಕ್ಷಯರೋಗ ಮುಕ್ತ ಹಾವೇರಿ ಜಿಲ್ಲೆಗೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದ ಜಿ.ಎಚ್. ಕಾಲೇಜು ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷಯರೋಗದ ಕುರಿತು ಆರಂಭದ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ನೀಡಿದರೆ ಕ್ಷಯರೋಗ ಗುಣಪಡಿಸಬಹುದು. ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸರ್ಕಾರ ಕ್ಷಯರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧೋಪಚಾರ, ನಿಕ್ಷಯ ಪೋಷಣ ಅಭಿಯಾನ ಯೋಜನೆಯಡಿ ಒಂದು ಸಾವಿರ ರು. ಸಹಾಯಧನ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಅಗತ್ಯ ಚಿಕಿತ್ಸೆಯೊಂದಿಗೆ ಗುಣಮುಖರಾಗಬೇಕು. ಕ್ಷಯರೋಗ ತಡೆಗೆ ಆರೋಗ್ಯ ಇಲಾಖೆ ವಿವಿಧ ಚಟುವಟಿಕೆಗಳ ಆಯೋಜನೆ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು. ಕ್ಷಯರೋಗ ಸಾವಿರಾರು ವರ್ಷಗಳಿಂದ ಇರುವ ರೋಗವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ. 25ರಷ್ಟು ಕ್ಷಯರೋಗದಿಂದ ಮರಣ ಸಂಭವಿಸುತ್ತಿರುವ ಉಲ್ಲೇಖವಿದೆ. ಮೊದಲಿಗಿಂತ ಈಗ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯ 27 ಪಂಚಾಯಿತಿಗಳು ಟಿಬಿ ಮುಕ್ತ ಪಂಚಾಯಿತಿಗಳಾಗಿದ್ದು, ಈ ಹಿನ್ನೆಲೆ ಆ ಪಂಚಾಯಿತಿಗಳ ಮುಖ್ಯಸ್ಥರನ್ನು ಸನ್ಮಾನಿಸಲಾಗುತ್ತಿದೆ ಎಂದರು.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಲೇಶ್ ಕ್ಷಯರೋಗದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವೈದ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿರಕ್ತಮಠ, ಕ್ಷಯರೋಗಿಗಳಿಗೆ ಫುಡ್ ಕಿಟ್ ನೀಡಿದ ನರೇಶ ಮಂತಟ್ಟಿ ಹಾಗೂ ಹಾವೇರಿ ಟಿಬಿ ಸೆಂಟರ್‌ಗೆ ಟ್ರೆನೇಟ್ ಮಿಷನ್ ನೀಡಿದ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಜಗದೀಶ ಪಾಟೀಲ, ಡಾ. ಸರಿತಾ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಪ್ರಾಂಶುಪಾಲರಾದ ಸಂಧ್ಯಾ ಕುಲಕರ್ಣಿ ಇತರರು ಉಪಸ್ಥಿತರಿದ್ದರು. ರೋಗ ಬರುವ ಮೊದಲು ಜಾಗೃತರಾಗಿ

ರಾಣಿಬೆನ್ನೂರು: ಕ್ಷಯರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗಬಹುದು ಎಂದು ಡಿ.ಎಂ. ಇಂಗಳಗಿ ತಿಳಿಸಿದರು.ಸ್ಥಳೀಯ ರಾ.ತಾ.ಶಿ. ಸಂಸ್ಥೆಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಗ ಬರುವುದಕ್ಕಿಂತ ಮೊದಲು ಜಾಗೃತಿ ವಹಿಸಬೇಕು ಎಂದರು.

ಪ್ರಾ. ಸಿ.ಎ. ಹರಿಹರ ಮಾತನಾಡಿ, ಪ್ರತಿವರ್ಷ ಕ್ಷಯರೋಗವನ್ನು ಕೊನೆಗೊಳಿಸುವ ಜಾಗತಿಕ ಪ್ರಯತ್ನಗಳಿಂದ 2000ನೇ ಇಸ್ವಿಯಿಂದ 79 ಮಿಲಿಯನ್ ಜೀವಗಳನ್ನು ಉಳಿಸಲಾಗಿದೆ ಎಂದರು.

ಡಾ. ಸರಸ್ವತಿ ಬಮ್ಮನಾಳ, ಡಾ. ಮಧುಕುಮಾರ ಆರ್., ಡಾ. ರಾಮರೆಡ್ಡಿ ರಡ್ಡೇರ, ಡಾ. ಪಿ.ಬಿ. ಕೊಪ್ಪದ, ಅಂಜನಾ ಪವಾರ, ಕಲ್ಲನಗೌಡ, ರೇವತಿ ಹಾಗೂ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.