ಕನ್ನಡಪ್ರಭ ವಾರ್ತೆ ಅರಸೀಕೆರೆ

ಶಿಕ್ಷಕರೊಂದಿಗೆ ಆತ್ಮೀಯತೆ ಹಾಗೂ ಸಮನ್ವಯದ ಮೂಲಕ ಸೇವೆ ಸಲ್ಲಿಸಿದ ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್‌ ಅವರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.ಕಲ್ಲುಸಾದರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಶಂಕರ್‌, ತಮ್ಮ ಕಾರ್ಯಾವಧಿಯಲ್ಲಿ ತಾಲೂಕಿನ ಶಿಕ್ಷಕರಿಂದ ಉತ್ತಮ ಸಹಕಾರ ದೊರೆತಿದ್ದು, ಅದು ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಾಯವಾಗಿದೆ ಎಂದು ಹೇಳಿದರು.ಶಾಲಾ ಭೇಟಿ ವೇಳೆ ಶಿಕ್ಷಕರ ಕರ್ತವ್ಯನಿಷ್ಠೆ, ಶಿಸ್ತಿನ ನಡವಳಿಕೆ ಮತ್ತು ಅಗತ್ಯ ಮಾಹಿತಿಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿದ ರೀತಿಯು ಗಮನಾರ್ಹವಾಗಿದೆ. ಈ ಸಹಕಾರವೇ ತಮ್ಮ ಕಾರ್ಯಕ್ಕೆ ಬಲ ನೀಡಿದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್‌ ಮಾತನಾಡಿ, ಶಂಕರ್‌ ಅವರು ಶಿಕ್ಷಕರ ತರಬೇತಿ, ಮಾಹಿತಿ ಸಂಗ್ರಹಣೆ ಮತ್ತು ಬೋಧನಾ ಕ್ರಮಗಳಲ್ಲಿ ಹೊಸತನ ತರಲು ಸದಾ ಪ್ರಯತ್ನಿಸುತ್ತಿದ್ದರು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಮಾಲೋಚನೆ ನಡೆಸುತ್ತಿದ್ದ ಅವರು, ಶಿಕ್ಷಕರು ಮತ್ತು ಸಿಆರ್‌ಪಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು. ಜಿಲ್ಲಾ ಮಟ್ಟದಲ್ಲಿಯೂ ಅವರ ಕಾರ್ಯಶೈಲಿ ಮೆಚ್ಚುಗೆ ಪಡೆದಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ, ಕಾರ್ಯದರ್ಶಿ ಕುಮಾರ್‌, ಉಪಾಧ್ಯಕ್ಷೆ ರಾಧಾಮಣಿ, ನಿರ್ದೇಶಕ ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದು, ಶಂಕರ್‌ ಅವರ ಸೇವೆಯನ್ನು ಸ್ಮರಿಸಿದರು.