ಮುಂದಿನ ದಿನಗಳಲ್ಲಿ ವಿಮಾ ಕಂಪನಿ ವಿರುದ್ಧ ಹೋರಾಟ: ವೀರಣ್ಣಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ರೈತರಿಗೆ ಶೇಂಗಾ ಬೆಳೆವಿಮೆ ನೀಡದೆ ಸತಾಯಿಸುತ್ತಿರುವ ವಿಮಾ ಕಂಪನಿ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರನ್ನು ವಂಚಿಸುತ್ತಲೇ ಬಂದಿವೆ. ಚುನಾವಣೆ ಸಮಯದಲ್ಲಿ ಮಾತ್ರ ರೈತರನ್ನು ಓಲೈಸುತ್ತವೆ. ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವ ಚಳ್ಳಕೆರೆ ತಾಲೂಕಿನಲ್ಲಿ ರೈತರು ನಿರಂತರವಾಗಿ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ.ಬಿತ್ತಿದ ಬೀಜ ಮೊಳಕೆಯೊಡಯುವ ಹೊತ್ತಿಗೆ ಮಳೆರಾಯ ಕೈಕೊಟ್ಟು ಇಟ್ಟ ಬೆಳೆ ಕೈ ಸೇರದಂತೆ ಆಗಿದೆ. ಒಂದು ಕಾಲದಲ್ಲಿ ಶೇಂಗಾ ಬೆಳೆಗೆ ಹೆಸರುವಾಸಿಯಾಗಿದ್ದ ಚಳ್ಳಕೆರೆಯ ರೈತರು ಶೇಂಗಾ ವಿಮೆಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ ಎಂದು ವಿವರಿಸಿದರು.
2022ರಿಂದ 2026ರವರೆಗೆ 471ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಸಃಮಾರು 36,766ರೈತರು ಬೆಳೆವಿಮೆ ಕಟ್ಟಿದ್ದಾರೆ. ಬೆಳೆ ನಷ್ಟವಾಗಿರುವುದು ಇದೀಗ ಕೃಷಿ ಇಲಾಖೆಯ ವರದಿಗಳೇ ಹೇಳುತ್ತಿವೆ. ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರ ಬೆಳೆ ವಿಮೆ ಕೊಡಿಸಿಕೊಡಲು ಮನಸ್ಸು ಮಾಡಬೇಕು. ಶೇಂಗಾ ಬೆಳೆ ನಷ್ಟ ಆದಾಗಿನಿಂದಲೂ ರೈತರು ಹೋರಾಟ ಮಾಡಲಾಗುತ್ತದೆ. ಆದರೂ ಜನಪ್ರತಿನಿಧಿಗಳು ರೈತ ಹಿತ ಕಾಯಲು ಮುಂದೆ ಬರುತ್ತಿಲ್ಲ ಎಂದು ಕಿಡಿಕಾರಿದರು.
ಈ ಕೂಡಲೇ ಬೆಳೆವಿಮೆ ಕೊಡಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ರಾಜಣ್ಣ, ಬಿ.ತಿಪ್ಪೇಸ್ವಾಮಿಗೌಡ, ಹಿರೇಹಳ್ಳಿ ಯರ್ರಿಸ್ವಾಮಿ, ಎಂ.ಎನ್. ಚನ್ನಕೇಶವಮೂರ್ತಿ, ಟಿ.ತಿಪ್ಪೇಸ್ವಾಮಿ, ಜಯಣ್ಣ, ಕಸ್ತೂರಿತಿಮ್ಮನಹಳ್ಳಿ ತಿಪ್ಪೇಸ್ವಾಮಿ, ಜಿ.ಎಚ್. ಹನುಮಂತಪ್ಪ, ಗುರಯ್ಯ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.